ಮಲಪ್ಪುರಂ: ಆಕಸ್ಮಿಕವಾಗಿ ಕೊಳವೊಂದರಲ್ಲಿ ಬಿದ್ದ 50 ಸಾವಿರ ರೂ. ಮೌಲ್ಯದ ದುಬಾರಿ ಸ್ಮಾರ್ಟ್ಫೊನ್ ಕಳೆದುಕೊಂಡು ಕಂಗಾಲಾಗಿದ್ದ ವ್ಯಕ್ತಿಗೆ ಅಗ್ನಿಶಾಮಕ ಸಿಬ್ಬಂದಿ ನೆರವಾದ ಘಟನೆ ಕೇರಳದಲ್ಲಿ ನಡೆದಿದೆ.
ಕಡಂಬುಜಾ ನೆಡುವಂಚೇರಿ ನಿವಾಸಿ ಶಿಹಾಬುದೀನ್ ಗುರುವಾರ ತಮ್ಮ ಮನೆ ಸಮೀಪದ ಕೊಳದಲ್ಲಿ ದುಬಾರಿ ಮೊಬೈಲ್ ಅನ್ನು ಕಳೆದುಕೊಂಡಿದ್ದರು. ಈ ವೇಳೆ ನೆರೆ ಮನೆಯವರ ಜತೆ ಸೇರಿ ಸಾಕಷ್ಟು ಹುಡುಕಾಡಿದರೂ ಮೊಬೈಲ್ ಮಾತ್ರ ಪತ್ತೆಯಾಗಲಿಲ್ಲ. ಕೊಳವು ಸಾಕಷ್ಟು ಕೆಸರು ಮತ್ತು ಕಳೆಗಳಿಂದ ಕೂಡಿದ್ದರಿಂದ ಮೊಬೈಲ್ ಪತ್ತೆ ಕಷ್ಟವಾಗಿತ್ತು.
ಹುಡುಕುವುದು ಸಾಧ್ಯವಿಲ್ಲ ಎಂದರಿತ ಶಿಹಾಬುದೀನ್ ಬಳಿಕ ಮಲಪ್ಪುರಂ ಅಗ್ನಿಶಾಮಕ ಸಿಬ್ಬಂದಿ ಮೊರೆ ಹೋದರು. ಈ ವೇಳೆ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಅಧಿಕಾರಿ ಪಿ ಮುಹಮ್ಮದ್, ಶಿಬಿನ್ ಮತ್ತು ಸರತ್ ಕುಮಾರ್ ಸ್ಕೂಬಾ ಸೆಟ್ ಬಳಿಸಿಕೊಂಡು 20 ಅಡಿ ಆಳದ ಕೊಳಕ್ಕೆ ಜಿಗಿದು ಮೊಬೈಲ್ ಪತ್ತೆ ಮಾಡಿದರು.
ಮೊಬೈಲ್ ತುಂಬಾ ಆಧುನಿಕ ಫೀಚರ್ ಹೊಂದಿದ್ದರಿಂದ ನೀರಿಗೆ ಬಿದ್ದರೂ ಸಹ ಮೊಬೈಲ್ಗೆ ಏನು ಆಗಿರಲಿಲ್ಲ. ಮೊಬೈಲ್ ಮರಳಿ ಪಡೆದ ಶಿಹಾಬುದೀನ್ ಅಗ್ನಿಶಾಮಕ ಸಿಬ್ಬಂದಿ ಕಾರ್ಯಕ್ಕೆ ತುಂಬಾ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. (ಏಜೆನ್ಸೀಸ್)
ಇದನ್ನೂ ಓದಿ: ಮಗಳು ಬೇರೆ ಜಾತಿಯವನನ್ನು ಮದುವೆ ಆದಳೆಂದು ಅಪ್ಪ-ಅಮ್ಮ ಸಂಪಿಗೆ ಹಾರಿದ್ರು..
ತಲೆನೋವೆಂದು ಆಸ್ಪತ್ರೆಗೆ ಹೋದವನಿಗೆ ಕಾದಿತ್ತು ಶಾಕ್: 17 ವರ್ಷದಿಂದ ಮೆದುಳಿನಲ್ಲೇ ಇತ್ತು!