ತಿಪ್ಪಣ್ಣ ಅವಧೂತ ಹುಬ್ಬಳ್ಳಿ
ಉಣಕಲ್ಲ ಕೆರೆ ಅಂದ ತಕ್ಷಣ ತಟ್ಟನೆ ನೆನಪಾಗೋದು ಪಿಶಾಚಿ ಕಳೆ. ಆದರೆ, ಆ ಕಳೆಯ ನಡುವೆಯೂ ಪ್ರವಾಸಿಗರಿಗೆ ಆಹ್ಲಾದಕರ ವಾತಾವರಣ
ಕಲ್ಪಿಸಲು ಸ್ಮಾರ್ಟ್ ಸಿಟಿ ಕಂಪನಿ ಮುಂದಡಿ ಇಟ್ಟಿದೆ.
ಹುಬ್ಬಳ್ಳಿ ಜನರ ಬಹುದಿನದ ಬೇಡಿಕೆಯಂತೆ ಸ್ಮಾರ್ಟ್ ಸಿಟಿ ಕಂಪನಿ ಉಣಕಲ್ಲ ಕೆರೆ ಹಂತ- 2ನೇ ಅಡಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯ
ಕೈಗೆತ್ತಿಕೊಂಡಿದೆ. ಅದರಂತೆ ಎಂಎಎ ಇಂಡಿಯಾ ಸಂಸ್ಥೆಗೆ 39.89 ಕೋಟಿ ರೂ.ಗಳಿಗೆ ಟೆಂಡರ್ ನೀಡಿದೆ. 38.89 ಕೋಟಿ ರೂ.
ವೆಚ್ಚದಲ್ಲಿ ವಾಕಿಂಗ್ ಪಾತ್, ಲೈಟಿಂಗ್ ಸಿಸ್ಟ್ಂ, ವಾಕಿಂಗ್ ಪಾತ್ ಸುತ್ತ ತಂತಿ ಬೇಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ.
219 ಎಕರೆ ವಿಸ್ತಾರವಾಗಿರುವ ಕೆರೆ ಸುತ್ತ ಚೈನ್ ಲಿಂಕ್ ರೀತಿ ಜಾಲರಿ ನಿರ್ಮಾಣ ಮಾಡುವ ಕಾರ್ಯ ಭರದಿಂದ ಸಾಗುತ್ತಿದೆ. ಕೆರೆ
ಸುತ್ತಲೂ 5 ಕಿಮೀ ವಾಕಿಂಗ್ ಪಾತ್, ವಾಕಿಂಗ್ ಮಾಡುವವರು ಕೆರೆಯನ್ನು ಸುತ್ತುವರಿಯುವ ರೀತಿಯಲ್ಲಿ ಪಾತ್ ನಿರ್ಮಾಣವಾಗುತ್ತಿದೆ.
ಪೇವರ್ಸ್ ಅಥವಾ ಗ್ರಾನೈಟ್ಸ್ ಅಳವಡಿಸಿ ಪಾತ್ ನಿರ್ಮಿಸಬೇಕೆಂಬ ಸಂಕಲ್ಪ ಸ್ಮಾರ್ಟ್ ಸಿಟಿ ಅಧಿಕಾರಿಗಳದ್ದು.
ವೃದ್ಧರು ಹಾಗೂ ಅಂಗವಿಕಲರು ಕೆರೆ ಸೌಂದರ್ಯ ಸವಿಯಲು ನೆರವಾಗುವಂತೆ ಇಲೆಕ್ಟ್ರಿಕಲ್ ಕಾರ್ ವ್ಯವಸ್ಥೆ ಮಾಡುವ ಆಲೋಚನೆ ಸ್ಮಾರ್ಟ್
ಸಿಟಿಗಿದೆ. ಕೆರೆ ವೀಕ್ಷಿಸಲು ಬರುವ ಪ್ರವಾಸಿಗರು ಹಾಗೂ ವಾಕಿಂಗ್ ಮಾಡುವವರ ಹಿತದೃಷ್ಟಿಯಿಂದ ಮತ್ತು ಕೆರೆ ಅಂದ ಹೆಚ್ಚಿಸಲು 441
ವಿದ್ಯುತ್ ದೀಪಗಳ ಅಳವಡಿಕೆ ಮಾಡಲಾಗುತ್ತದೆ. ಪಾತ್ನ ಆಯ್ದ ಭಾಗಗಳಲ್ಲಿ ಮಳೆ-ಬಿಸಿಲಿನಿಂದ ರಕ್ಷಣೆ ಒದಗಿಸಲು ಕೆನೊಪಿ (ಮೇಲ್ಛಾವಣಿ)
ನಿರ್ಮಾಣ ಮಾಡಿ ಕೆರೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕೆಂಬ ಯೋಚನೆ ಸ್ಮಾರ್ಟ್ ಸಿಟಿಗಿದೆ.
ಮಳೆಗಾಲದಲ್ಲಿ ಉಣಕಲ್ಲ ಕೆರೆಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತದೆ. ಆ ನೀರು ಕಾಲುವೆ ಮೂಲಕ ಹೊರ ಹೋಗಿ ವ್ಯರ್ಥವಾಗುತ್ತಿದೆ.
ಅದನ್ನು ತಡೆಗಟ್ಟಿ ನೀರಿನ ಸಂಗ್ರಹ ಮಾಡಿಕೊಳ್ಳಬೇಕೆಂಬ ಆಲೋಚನೆಯಿಂದ ನೀರು ಹರಿದು ಹೋಗುವ ಸ್ಥಳದಲ್ಲಿ ಗ್ಯಾಬಿಯಾನ್ ವಾಲ್
(ಒತ್ತಡ ತಡೆಯುವ ಗೋಡೆ) ಅನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಗ್ಯಾಬಿಯಾನ್ ವಾಲ್ ಅನ್ನು ಕಲ್ಲು ಮತ್ತು ಕಬ್ಬಿಣದ ತಂತಿ ಬಳಸಿ
ನಿರ್ಮಿಸಲಾಗುತ್ತದೆ. ಎಷ್ಟೇ ನೀರಿನ ಒತ್ತಡ ಬಂದರೂ ಅದನ್ನು ತಡೆಯುವ ಶಕ್ತಿ ಈ ಗ್ಯಾಬಿಯಾನ್ ವಾಲ್ಗೆ ಇರುತ್ತದೆ ಎನ್ನುತ್ತಾರೆ ಸ್ಮಾರ್ಟ್
ಸಿಟಿ ಅಧಿಕಾರಿಗಳು.
ಈಗಿರುವ 800 ಮೀಟರ್ ಉದ್ದದ ಕೆರೆ ಒಡ್ಡಿಗೆ ಟರ್ಫ್ ಅಳವಡಿಕೆ ಮಾಡಲಾಗುತ್ತದೆ. ಗಾಂಧಿ ಫಾರ್ಮ್ ಬಳಿ ಜಾನುವಾರು ಸಂಚಾರಕ್ಕೆ
ಸೇತುವೆ ನಿರ್ಮಾಣ ಹಾಗೂ ವಾಕಿಂಗ್ ಪಾತ್ನಲ್ಲಿ ಸ್ಥಳದ ಲಭ್ಯತೆಗೆ ಅನುಗುಣವಾಗಿ ಎರಡೂ ಬದಿ ಗಿಡ ನೆಡುವ ಯೋಚನೆ ಉಣಕಲ್ಲ ಕೆರೆ
ಹಂತ -2 ಯೋಜನೆಯಲ್ಲಿದೆ.
ಪಿಶಾಚಿ ಕಳೆ ತೆಗೆಯುವ ಹೊಣೆ ಪಾಲಿಕೆಯದು: ಉಣಕಲ್ಲ ಕೆರೆಯಲ್ಲಿ ಅಪಾರವಾಗಿ ಬೆಳೆದಿರುವ ಪಿಶಾಚಿ ಕಳೆ ತೆಗೆಯುವ ಹೊಣೆ ಮಹಾನಗರ ಪಾಲಿಕೆಯದ್ದಾಗಿದೆ. ಉಣಕಲ್ಲ ಕೆರೆಗೆ ಹರಿದು
ಬರುವ ಒಳಚರಂಡಿ ನೀರನ್ನು ಮೊದಲು ತಡೆಗಟ್ಟಬೇಕಿದೆ. ಪ್ರವೇಶ ದರವನ್ನು ಮಹಾನಗರ ಪಾಲಿಕೆಯೇ ಸಂಗ್ರಹಿಸುತ್ತಿದೆ. ಹೀಗಾಗಿ ಕೆರೆ
ಅಭಿವೃದ್ಧಿಯೂ ಅವರದ್ದೇ ಎನ್ನುತ್ತಾರೆ ಸ್ಮಾರ್ಟ್ ಸಿಟಿ ಎಇಇ ವೀರೇಶ ವರೂರ.
ಉಣಕಲ್ಲ ಕೆರೆ ಉನ್ನತೀಕರಣವೇ ನಮ್ಮ ಪ್ರಮುಖ ಯೋಜನೆ. ಉಣಕಲ್ಲ ಕೆರೆ ಹಂತ -2ರಡಿ ಈಗಾಗಲೇ ಹಲವು ಅಭಿವೃದ್ಧಿ ಕಾರ್ಯಗಳುಭರದಿಂದ ಸಾಗುತ್ತಿವೆ. ಕೆರೆ ಸುತ್ತ ವಾಕಿಂಗ್ ಪಾತ್, ಲೈಟಿಂಗ್ ವ್ಯವಸ್ಥೆ, ಕುಳಿತುಕೊಳ್ಳಲು ಆಸನ ವ್ಯವಸ್ಥೆ ಸೇರಿ ಇತರ ಅಭಿವೃದ್ಧಿಗೆ ನಾವು
ಸಿದ್ಧರಿದ್ದೇವೆ. ಉಣಕಲ್ಲ ಕೆರೆ ಮುಂದೆ ರಾಜ್ಯದ ಸ್ಮಾರ್ಟ್ ಕೆರೆಗಳಲ್ಲಿ ಒಂದಾಗಲಿದೆ.
ಶ್ರೀನಿವಾಸ ಪಾಟೀಲ, ಇಇ, ಸ್ಮಾರ್ಟ್ ಸಿಟಿ ಕಂಪನಿ