ಅರಕೇರಾ: ವಿಧಾನಸಭಾ ಚುನಾವಣೆ ಕೊನೆಯ ಘಳಿಗೆಯಲ್ಲಿ ವಿರೋಧ ಪಕ್ಷದವರ ಕುತಂತ್ರ ಹಾಗೂ ಅಪಪ್ರಚಾರದಿಂದ ಕಾಂಗ್ರೆಸ್ ಅಭ್ಯರ್ಥಿ ಶ್ರೀದೇವಿ ರಾಜಶೇಖರ ನಾಯಕಗೆ ಹಿನ್ನಡೆ ಆಯಿತು ಎಂದು ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಹೇಳಿದರು.
ಇದನ್ನೂ ಓದಿ: ಅಪಪ್ರಚಾರ ಮಾಡಿದ್ದವರಿಗೆ ಜನತೆ ತಕ್ಕ ಉತ್ತರ
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ನಮ್ಮ ಸಹೋದರ, ಮಾಜಿ ಸಂಸದ ಬಿ.ವಿ ನಾಯಕ ಕೊನೆಯ ಘಳಿಗೆಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರಿಂದ ಕ್ಷೇತ್ರದಲ್ಲಿ ಪಕ್ಷಕ್ಕೆ ಆಘಾತ ಉಂಟಾಯಿತು. ಕಾಂಗ್ರೆಸ್ ಟಿಕೆಟ್ ಘೋಷಣೆ ವಿಳಂಬವಾಗಿದ್ದರಿಂದ ಪಕ್ಷ ಸಂಘಟನೆಗೆ ಹೆಚ್ಚಿನ ಕಾಲಾವಕಾಶ ಸಿಗಲಿಲ್ಲ.
ಮತದಾನಕ್ಕೆ ಒಂದು ದಿನ ಬಾಕಿ ಇರುವಾಗ ಕಾಂಗ್ರೆಸ್ ಅಭ್ಯರ್ಥಿ 21 ಕೋಟಿ ರೂ. ಪಡೆದು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್ ನಾಯಕರು ಅಪಪ್ರಚಾರ ನಡೆಸಿದ್ದು ಕಾಂಗ್ರೆಸ್ಗೆ ಮುಳುವಾಯಿತು ಎಂದರು.
ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕೀಯ ಮಾಡಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ. ನಾಮಪತ್ರ ಸಲ್ಲಿಸುವವರೆಗೆ ಜತೆಯಿದ್ದ ಕೆಲ ಕಾರ್ಯಕರ್ತರು ತಮ್ಮ ವೈಯಕ್ತಿಕ ಹಿತಾಸಕ್ತಿಗೋಸ್ಕರ ನಮ್ಮನ್ನು ಕೈಬಿಟ್ಟರು. ಪ್ರಾಮಾಣಿಕ ಕಾರ್ಯಕರ್ತರನ್ನು ಒಗ್ಗೂಡಿಸಿ ಚುನಾವಣೆ ಎದುರಿಸಿದ್ದೇವೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಪ್ರಾಮಾಣಿಕರ ಕಾರ್ಯಕರ್ತರನ್ನು ಬೆಳೆಸಲಾಗುವುದು. ಬಿಜೆಪಿಯವರಿಂದ ಹಣ ಪಡೆದಿದ್ದು ಸಾಬೀತು ಪಡಿಸಿದರೆ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಎ.ರಾಜಶೇಖರ ನಾಯಕ ಹೇಳಿದರು.