ಬೈಲಹೊಂಗಲ: ಶರಣರ ವಚನಗಳು ಸಮಾಜಕ್ಕೆ ಮಾದರಿಯಾಗಿವೆ. ಹಾಗಾಗಿ ಶಿವದಾಸಿಮಯ್ಯ ಅವರ ವಚನಗಳನ್ನು ಸರ್ಕಾರ ಹೊರತರಬೇಕು ಎಂದು ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ ಹೇಳಿದ್ದಾರೆ.
ಪಟ್ಟಣದ ರುದ್ರಾಕ್ಷಿ ಮಠದಲ್ಲಿ ಲಿಂಗಾಯತ ಶಿವಶಿಂಪಿ ಸಮುದಾಯದ ಆಶ್ರಯದಲ್ಲಿ ಜರುಗಿದ ಶಿವಶರಣ ಶಿವದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದ ಉದ್ಧಾರಕ್ಕೆ ಶಿವಶರಣರು ನೀಡಿದ ಕೊಡುಗೆ ಅಪಾರವಾಗಿದೆ. ಅದರಲ್ಲೂ ಶಿವಶಿಂಪಿ ಸಮಾಜಕ್ಕೆ ಶಿವದಾಸಿಮಯ್ಯ ನೀಡಿದ ಕೊಡುಗೆ ಅಪಾರವಾಗಿದೆ ಎಂದರು. ಸಮುದಾಯದ ಮುಖಂಡ ಪರಂಜ್ಯೋತಿ ಉಮರಾಣಿ ಮಾತನಾಡಿ, ಸಮಾಜಕ್ಕೆ ಶಿವದಾಸಿಯ್ಯ ಅವರು ದೊಡ್ಡ ಕಾಣಿಕೆ ನೀಡಿದ್ದಾರೆ. ಅವರ ತತ್ತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು. ಇದಕ್ಕೂ ಮುನ್ನ ಸಾಮೂಹಿಕ ಲಿಂಗಪೂಜೆ, ಉಡಿ ತುಂಬುವ ಕಾರ್ಯಕ್ರಮ, ಪೂರ್ಣಕುಂಭ ಆರತಿಯೊಂದಿಗೆ ಶಿವದಾಸಿಮಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈರಪ್ಪ ಕಾದ್ರೊಳ್ಳಿ ಮಾತನಾಡಿದರು. ರುದ್ರಪ್ಪ ಕಾದ್ರೊಳ್ಳಿ, ಶಿವಶಿಂಪಿ ಸಮುದಾಯದ ಉಪಾಧ್ಯಕ್ಷ ಗಿರಿಮಲ್ಲಪ್ಪ ಆಸಂಗಿ, ಅಣ್ಣಪ್ಪ ರೇಶ್ಮಿ, ರಮೇಶ ನಿಟ್ಟೂರ, ದೊಡ್ಡವೀರಪ್ಪ ಕಾದ್ರೊಳ್ಳಿ, ಶಿವಾನಂದ ಪಾವಟೆ, ಕುಮಾರ ರೇಶ್ಮಿ, ಸಂಗಪ್ಪ ಕಾದ್ರೊಳ್ಳಿ, ಜಗದೀಶ ಲೋಕಾಪುರ ಇತರರು ಇದ್ದರು ಡಾ.ಮಹಾಂತೇಶ ರಾಮಣ್ಣವರ ಸ್ವಾಗತಿಸಿದರು. ಮಹಾಂತೇಶ ರೇಶ್ಮಿ ಮತ್ತು ವಿರೂಪಾಕ್ಷ ಕಾದ್ರೊಳ್ಳಿ ನಿರೂಪಿಸಿದರು. ಬಾಲಚಂದ್ರ ರೇಶ್ಮಿ ವಂದಿಸಿದರು.
ವಿಶೇಷ ಪೂಜೆ, ಪ್ರಾರ್ಥನೆ
ಬೈಲಹೊಂಗಲ ಪಟ್ಟಣ ಸೇರಿ ತಾಲೂಕಾದ್ಯಂತ ಮಹಾಶಿವರಾತ್ರಿ ಅಂಗವಾಗಿ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಜರುಗಿತು. ಶಿವನ ದೇವಸ್ಥಾನಕ್ಕೆ ಭಕ್ತರು ಕುಟುಂಬ ಸಮೇತ ತೆರಳಿ ದರ್ಶನ ಪಡೆದರು.ಇತಿಹಾಸ ಪ್ರಸಿದ್ಧ ಕಲ್ಲಗುಡಿ ರಾಮಲಿಂಗೇಶ್ವರ ದೇವಸ್ಥಾನದ ಈಶ್ವರಲಿಂಗ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಗೊಂಬಿ ಗುಡಿ ಈಶ್ವರ ದೇವಸ್ಥಾನ, ನೀರಾವರಿ ಇಲಾಖೆ ಆವರಣದಲ್ಲಿರುವ ಪಂಚವಟಿ ದೇವಸ್ಥಾನ, ಮರಡಿ ಗಲ್ಲಿಯಲ್ಲಿರುವ ಮೈಲಾರಲಿಂಗೇಶ್ವರ ದೇವಸ್ಥಾನ, ಮರಡಿ ಬಸವೇಶ್ವರ ದೇವಸ್ಥಾನ, ಮಡಿವಾಳೇಶ್ವರ ದೇವಸ್ಥಾನ, ಹಳೇ ಹನುಮಂತ ದೇವರ ದೇವಸ್ಥಾನ, ಮೈಲಾರಲಿಂಗೇಶ್ವರ ದೇವಸ್ಥಾನ, ಕಲ್ಮೇಶ್ವರ ದೇವಸ್ಥಾನದಲ್ಲಿ ಪೂಜೆ, ಪ್ರಾರ್ಥನೆ ನಡೆಯಿತು.