ಸಿರಿಗೆರೆ: ಲಾಕ್ಡೌನ್ ಉಲ್ಲಂಘಿಸಿದರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಚಿತ್ರದುರ್ಗ ವೃತ್ತ ನಿರೀಕ್ಷಕ ಗಿರೀಶ್ ಎಚ್ಚರಿಸಿದರು.
ಪೊಲೀಸ್ ಇಲಾಖೆಯಿಂದ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರೊನಾ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
ಎಲ್ಲರೂ ಸರ್ಕಾರದ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು. ತುರ್ತು ಸಂದರ್ಭದಲ್ಲಿ ಮನೆಯಿಂದ ಹೊರ ಬಂದರೆ ಮಾಸ್ಕ್ ಧರಿಸಬೇಕು. ಬ್ಯಾಂಕ್, ನ್ಯಾಯಬೆಲೆ ಅಂಗಡಿ, ಬೇಕರಿ, ದಿನಸಿ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹರಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಸಿಂಡಿಕೇಟ್ ಬ್ಯಾಂಕ್ ಹಾಗೂ ಎಟಿಎಂ ಎದುರು ಜನಧನ ಖಾತೆಗೆ ಜಮೆಯಾದ ಹಣ ಬಿಡಿಸಿಕೊಳ್ಳಲು ಗುಂಪಾಗಿ ನಿಂತಿದ್ದ ಜನರನ್ನು ಚದುರಿಸಿದ ಪೊಲೀಸರು, ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹಾರ ನಡೆಸುವಂತೆ ತಿಳಿ ಹೇಳಿದರು.
ಗ್ರಾಪಂ ಅಧ್ಯಕ್ಷೆ ರೂಪಾ, ಪಿಡಿಒ ಪಿ.ಲೋಕೇಶ್, ಪಿಎಸ್ಐ ಟಿ.ರಾಜು, ಪ್ರಭಾರ ಪಿಎಸ್ಐ ಬಾಹುಬಲಿ, ಸಿರಿಗೆರೆ ಠಾಣಾ ಸಿಬ್ಬಂದಿ ಭಾಗವಹಿಸಿದ್ದರು.