ಜಾತ್ರಾ ಮಹೋತ್ಸವ ನಿಮಿತ್ತ ಸಾಮೂಹಿಕ ವಿವಾಹ, ಧಾರ್ಮಿಕ ಸಭೆ
ಸಿರವಾರ: ಮನುಷ್ಯನಾಗಿ ಜನ್ಮ ತಾಳಿದ ಮೇಲೆ ಇನ್ನೊಬ್ಬರ ಬಾಳಿಗೆ ಬೆಳಕಾಗಬೇಕು. ಆಗ ಈ ಜೀವನಕ್ಕೆ ಬೆಲೆ ಬರುತ್ತದೆ ಎಂದು ಜಾಲಹಳ್ಳಿಯ ಜಯಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ನವಲಕಲ್ ಬೃಹನ್ಮಠದಲ್ಲಿ ಲಿಂ.ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳ 24ನೇ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಮಾತನಾಡಿದರು. ಶ್ರೀ ಮಠ ಈ ಭಾಗದ ಭಕ್ತರ ಆಸ್ತಿ. ಸಹಾಯ ಬೇಡಿ ಬಂದವರ ಕಷ್ಟಗಳನ್ನು ಕಳೆಯುವ ಮೂಲಕ ಹಿರಿಯ ಶ್ರೀಗಳ ಆದರ್ಶದೊಂದಿಗೆ ಮಠದ ಕಾರ್ಯ ಮುಂದೆ ಸಾಗುತ್ತಿರುವುದು ಸಂತೋಷ ತಂದಿದೆ. ಪ್ರತಿ ವರ್ಷ ಜಾತ್ರೆ ಸಂದರ್ಭ ಸಾಮೂಹಿಕ ವಿವಾಹ, ಗ್ರಾಮೀಣಾ ಕ್ರೀಡಾಕೂಟ ನಡೆಸುವ ಮೂಲಕ ಜಿಲ್ಲೆಯ ಆಕರ್ಷಣಾ ಕೇಂದ್ರವಾಗಿದೆ. ಇದೇ ರೀತಿ ಶ್ರೀಮಠದ ಕಾರ್ಯ ಮುಂದುವರಿಯಲಿ ಎಂದರು.
ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಮುಂದಿನ ದಿನಗಳಲ್ಲಿ ಶ್ರೀಮಠದ ಅಭಿವೃದ್ಧಿಗೆ ಜತೆಯಾಗಿರುವುದಾಗಿ ಭರವಸೆ ನೀಡಿದರು. ಶ್ರೀಮಠದ ಪೀಠಾದಿಪತಿ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ನಿಮ್ಮೆಲ್ಲೆರ ಮಾರ್ಗದರ್ಶನ, ಭಕ್ತರ ಸಹಕಾರ, ಎಲ್ಲರ ನಂಬಿಕೆ, ಪ್ರೀತಿ, ವಿಶ್ವಾಸ ಹೀಗೆ ಮುಂದುವರಿಯಲ್ಲಿ ಎಂದರು.
ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ ಸಾಮೂಹಿಕ ವಿವಾಹದಲ್ಲಿ 63 ಜೋಡಿ ದಾಂಪತ್ಯಕ್ಕೆ ಕಾಲಿಟ್ಟವು. ಗಬ್ಬೂರಿನ ಬೂದಿಬಸವ ಶಿವಾಚಾರ್ಯ ಸ್ವಾಮೀಜಿ, ರಾಯಚೂರು ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ದೇವಾಪುರದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿಂಧನೂರಿನ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಮಸ್ಕಿಯ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಅಂಕಲಿಮಠದ ವೀರಭದ್ರ ಸ್ವಾಮೀಜಿ, ಬಲ್ಲಟಗಿಯ ಬಸವರಾಜಯ್ಯ ಸ್ವಾಮಿಗಳು ಇತರರು ಇದ್ದರು.