ಸಿರಗುಪ್ಪ: ಮನುಷ್ಯ ನಿತ್ಯ ಒತ್ತಡದ ಜೀವನ ಸಾಗಿಸುತ್ತಿದ್ದು, ನೆಮ್ಮದಿಯ ಜೀವನ ನಡೆಸಲು ಭಕ್ತಿ ಮಾರ್ಗ ಒಂದೇ ದಾರಿಯಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ತಿಳಿಸಿದರು.
ನಗರದ ಪಿನಾಕಿ ಆಶ್ರಮದಲ್ಲಿ ತಾಲೂಕು ವೀರಶೈವ ಲಿಂಗಾಯತ ಸಮುದಾಯ ಹಮ್ಮಿಕೊಂಡಿದ್ದ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ನಿತ್ಯ ಇಷ್ಟಲಿಂಗ ಪೂಜೆಯ ಮೂಲಕ ನೆಮ್ಮದಿ ಪಡೆಯಬಹುದು. ಪ್ರತಿಯೊಬ್ಬರೂ ತಮ್ಮ ತಮ್ಮ ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೇ ಲಿಂಗಪೂಜೆ ಸೇರಿ ಧಾರ್ಮಿಕ ಕಾರ್ಯಕ್ರಮಗಳ ಮಹತ್ವ ತಿಳಿಸಬೇಕು. ಅಂದಾಗ ಮಾತ್ರ ಮುಂದಿನ ಪೀಳಿಗೆ ಗುರು, ಹಿರಿಯರನ್ನು ಗೌರವಿಸುವ ಪರಿಪಾಠ ಕಲಿಯಲು ಸಾಧ್ಯ ಎಂದರು.
ಬೆಳಗಿನ ಜಾವ ನಡೆದ ಸಾಮೂಹಿಕ ಶಿವದೀಕ್ಷಾ ಕಾರ್ಯಕ್ರಮದಲ್ಲಿ 27ಕ್ಕೂ ಹೆಚ್ಚು ಮಕ್ಕಳ ಶಿವದೀಕ್ಷಾ ಕಾರ್ಯಕ್ರಮ ನಡೆಯಿತು. ನಂತರ ಶ್ರೀಗಳ ಇಷ್ಟಲಿಂಗ ಪೂಜೆಯಲ್ಲಿ ನೂರಾರು ಭಕ್ತರು ಭಾಗವಹಿಸಿ ಪ್ರಸಾದ ಪಡೆದರು.
ಹರಗಿನಡೋಣಿಯ ಸಿದ್ದಲಿಂಗೇಶ್ವರ ಶಿವಚಾರ್ಯ ಶ್ರೀಗಳು, ಹಚ್ಚೊಳ್ಳಿಯ ಮುತ್ತಿನ ಪೆಂಡೆ ಶಿವರುದ್ರಮುನಿ ಸ್ವಾಮೀಜಿ, ಸಿರಗುಪ್ಪದ ಗುರುಬಸವ ಮಠದ ಬಸವಭೂಷಣ ಶ್ರೀಗಳು, ಮುಖಂಡರಾದ ಚೊಕ್ಕಬಸವನಗೌಡ, ಚಂದ್ರಯ್ಯಸ್ವಾಮಿ, ಎಚ್.ಕೆ.ಮಲ್ಲಿಕಾರ್ಜುನಯ್ಯಸ್ವಾಮಿ, ಸಿದ್ದರಾಮಯ್ಯಸ್ವಾಮಿ, ಎನ್.ಜಿ.ಬಸವರಾಜಪ್ಪ, ಟಿ.ಎಂ.ಶಿವಕುಮಾರ್ಸ್ವಾಮಿ ಇದ್ದರು. ಸಂಗೀತಾ ಗಾಯನವನ್ನು ಜಮಖಂಡಿಯ ಶ್ರೀಗಳು ಹಾಗೂ ನಾಮ ಜಗದೀಶ್ ಗವಾಯಿಗಳು ನಡೆಸಿಕೊಟ್ಟರು, ತಬಲ ಸಾತ್ ಪ್ರಶಾಂತ್ ನಿರ್ವಹಿಸಿದರು.