ಸಿಂಧನೂರು: ಹಳೇ ಪಿಂಚಣಿ ಯೋಜನೆಯನ್ನು ಕೂಡಲೇ ಜಾರಿಗೊಳಿಸಲು ಒತ್ತಾಯಿಸಿ ಕರ್ನಾಟಕ ಸರ್ಕಾರಿ ಎನ್ಪಿಎಸ್ ನೌಕರರ ಸಂಘದ ತಾಲೂಕು ಘಟಕ ಮಂಗಳವಾರ ಬೃಹತ್ ಸಂಕಲ್ಪ ಯಾತ್ರೆ ನಡೆಸಿತು. ಪಟ್ಟಣದ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಗಾಂಧಿ ವೃತ್ತ, ಮಹರ್ಷಿ ವಾಲ್ಮೀಕಿ ವೃತ್ತ, ಕನಕದಾಸ ವೃತ್ತದಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ನಗರಸಭೆಗೆ ಬಂದು ತಲುಪಿತು.
ಹಳೇ ಪಿಂಚಣಿ ಅವಶ್ಯಕತೆ ಬಗ್ಗೆ ಹಲವು ಬಾರಿ ಸರ್ಕಾರದ ಗಮನ ಸೆಳೆದಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ನಮಗೆ ಈ ಯೋಜನೆ ಜಾರಿಗೊಳಿಸಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಸಿದ್ದಪ್ಪ ಸಂಗಣ್ಣ ಮಾತನಾಡಿ, ಸರ್ಕಾರಿ ಎನ್ಪಿಎಸ್ ನೌಕರರು, ಇತರ ಇಲಾಖೆ ಹಿರಿಯ ನೌಕರರು ಡಿ.19ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುವ ಹೋರಾಟದಲ್ಲಿ ಭಾಗವಹಿಸುವ ಮೂಲಕ ನಾವೆಲ್ಲ ನಿಶ್ಚಿತ ಪಿಂಚಣಿ ಪಡೆಯೋಣ ಎಂದರು.