ಸಿಂಧನೂರು: ದಿನಕ್ಕೆ ಎರಡು ಬಾರಿ ನರೇಗಾ ಕೂಲಿಕಾರರ ಹಾಜರಾತಿ ಪಡೆಯುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ತಾಪಂ ಎದುರು ಶುಕ್ರವಾರ ಪ್ರತಿಭಟನೆ ನಡೆಸಿತು.
ಕೂಲಿಕಾರರ ಹಾಜರಾತಿ ಮತ್ತು ಛಾಯಾ ಚಿತ್ರವನ್ನು ದಿನಕ್ಕೆ ಎರಡು ಬಾರಿ ಸೆರೆ ಹಿಡಿದು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಬೇಕೆಂಬ ಕೇಂದ್ರ ಸರ್ಕಾರದ ಆದೇಶ ಅಸಂಬದ್ಧವಾಗಿದ್ದು, ಇದನ್ನು ಬಲವಾಗಿ ಖಂಡಿಸುತ್ತೇವೆ. ಕೂಲಿಕಾರರ ಮುಖ ಸ್ಪಷ್ಟವಾಗಿ ಕಾಣಬೇಕಾದರೆ ಗುಣಮಟ್ಟದ ಸ್ಮಾರ್ಟ್ಫೋನ್ ಬೇಕಾಗುತ್ತದೆ. ನಮ್ಮ ಮೇಟಿಗಳ ಹಾಗೂ ಕೂಲಿಕಾರರ ಬಳಿ ಅಂತಹ ಸ್ಮಾರ್ಟ್ಫೋನ್ ಇಲ್ಲ. ಕೂಲಿ ಕಾರ್ಮಿಕರು ದಿನದ ನಿಗದಿತ ಕೆಲಸ ಮುಗಿದ ನಂತರ ಸಂಜೆ 5 ಗಂಟೆವರೆಗೆ ಕೆಲಸದ ಸ್ಥಳದಲ್ಲೇ ಇರಬೇಕೆಂಬ ನಿರ್ದೇಶನವು ಕಿರುಕುಳ ಎನಿಸಿ ಅನೇಕರು ಕೆಲಸಕ್ಕೆ ಹೋಗದಿರಲು ನಿರ್ಧಾರ ಮಾಡಿದ್ದಾರೆ ಎಂದು ದೂರಿತು.
ಕೇಂದ್ರ ಸರ್ಕಾರ ದಿನಕ್ಕೆ 600 ರೂ. ಕೂಲಿ ನಿಗದಿ ಮಾಡಬೇಕು. ಹೆಚ್ಚು ಕೆಲಸ ನೀಡಲು ಅನುದಾನ ಒದಗಿಸಬೇಕು. ಬೇಸಿಗೆ ದಿನಗಳಲ್ಲಿ ಕೆಲಸದ ಪ್ರಮಾಣ ಕಡಿಮೆ ಮಾಡಬೇಕು. ಮೇಟಿಗಳಿಗೆ ನೀಡಿರುವ ಶಿಕ್ಷಣ ಅರ್ಹತೆ ಅಸಂಬದ್ಧವಾಗಿದ್ದು ಓದಲು, ಬರೆಯಲು ಬಂದವರನ್ನು ಪರಿಗಣಿಸಬೇಕೆಂದು ಒತ್ತಾಯಿಸಿತು.
ಸಂಘದ ಅಧ್ಯಕ್ಷ ವೀರೇಶ ಸೋಮಲಾಪುರ, ಕುರುಕುಂದ ಗ್ರಾಮ ಘಟಕ ಅಧ್ಯಕ್ಷ ವೀರೇಶ, ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಕುರುಕುಂದಿ, ಗೇಸುದರಾಜ, ಯಂಕಪ್ಪ, ಗರೀಬ್ಸಾಬ್, ಶೇಕ್ಷಾಖಾದ್ರಿ, ಮಲ್ಲಿಕಾರ್ಜುನ, ಅಳ್ಳಪ್ಪ, ಶಂಕ್ರಪ್ಪ ಕೆಂಗಲ್, ರಾಮಣ್ಣ, ಈರಪ್ಪ, ಹನುಮಂತಪ್ಪ ಮೇಗಳಮನಿ, ಮಹಿಬೂಬ್ಸಾಬ್, ಹುಸೇನಪ್ಪ, ಈರಪ್ಪ ಮಡಿವಾಳ ಇದ್ದರು.