ಸಿಂಧನೂರು: ಶಾಲೆ, ಅಂಗನವಾಡಿ ಹಾಗೂ ಇತರ ವಿವಿಧ ಕಟ್ಟಡಗಳ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆಗೆ ಸಜ್ಜುಗೊಳಿಸಬೇಕೆಂದು ಕೆಆರ್ಐಡಿಎಲ್ ಅಧಿಕಾರಿಗೆ ಶಾಸಕ ವೆಂಕಟರಾವ ನಾಡಗೌಡ ಸೂಚನೆ ನೀಡಿದರು.
ನಗರದ ತಾಪಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬುಧವಾರ ಮಾತನಾಡಿದರು. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಗೆ ವಹಿಸಿರುವ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಇನ್ನೆಷ್ಟು ವರ್ಷಗಳು ಬೇಕು. ಎರಡು ವರ್ಷಗಳ ಹಿಂದೆ ನೀಡಿದ ದಢೇಸುಗೂರು, ಸೋಮಲಾಪುರ ಹಾಗೂ ಇತರ ವಿವಿಧೆಡೆತ ಶಾಲೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿಲ್ಲ. ವಿದ್ಯಾರ್ಥಿಗಳು ಬಯಲಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ. ನಿಮಗೆ ಮಾನ, ಮರ್ಯಾದೆ ಇದೆಯೋ, ಇಲ್ಲವೋ. ಸ್ವಲ್ಪವೂ ಜವಾಬ್ದಾರಿ ಇಲ್ಲ ಎಂದು ಜೆಇ ಕಾಶಿನಾಥರನ್ನು ತರಾಟೆಗೆ ತೆಗೆದುಕೊಂಡರು.
ಕಾಮಗಾರಿ ಪೂರ್ಣಗೊಳಿಸಿರುವ ಅಸ್ಪಷ್ಟ ಮಾಹಿತಿ ನೀಡಲು ಮುಂದಾದ ಜೆಇ ಕಾಶಿನಾಥರನ್ನು ಶಾಸಕ ನಾಡಗೌಡ, ನನಗೇನು ಈಗ ಸಮಜಾಯಿಷಿ ನೀಡುವ ಅಗತ್ಯವಿಲ್ಲ. ಈ ಮಾಸಾಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಮಾಹಿತಿ ನೀಡಬೇಕು. ತಾಲೂಕಿನ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಚುನಾವಣೆ ನೀತಿ ಸಂಹಿತೆ ಜಾರಿಯಾಗುವುದರೊಳಗೆ ಮುಖ್ಯಮಂತ್ರಿಯನ್ನು ಕರೆಯಿಸಿ ಉದ್ಘಾಟಿಸಲಾಗುವುದು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದರು.