ಸಿಂಧನೂರು: ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಹಾಸ್ಟೆಲ್ಗಳಲ್ಲಿ ಕೆಲಸ ಮಾಡುತ್ತಿರುವ ಅಡುಗೆಯವರು, ಸಹಾಯಕಿಯರು ಹಾಗೂ ವಾಚ್ಮನ್ಗಳ ಬಾಕಿ ವೇತನ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಮಾದಿಗ ಮಹಾಸಭಾ ತಾಲೂಕು ಘಟಕ ತಹಸೀಲ್ದಾರ್ ಅರುಣ್ ಎಸ್.ದೇಸಾಯಿಗೆ ಶುಕ್ರವಾರ ಮನವಿ ಸಲ್ಲಿಸಿತು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದಲೂ ರೈತ ಕೂಲಿ ಕಾರ್ಮಿಕರು ಹಾಗೂ ಬಡಜನರು ಸೇರಿದಂತೆ ಎಲ್ಲ ವರ್ಗಗಳ ಪರಿಸ್ಥಿತಿ ತೀರ ಕಷ್ಟಕರವಾಗಿದೆ. ಹಾಸ್ಟೆಲ್ಗಳ ಸುಮಾರು 70ಕ್ಕೂ ಹೆಚ್ಚು ವಿವಿಧ ಸಿಬ್ಬಂದಿಗೆ 10 ತಿಂಗಳ ವೇತನ ನೀಡದೆ ಅಧಿಕಾರಿಗಳು, ಗುತ್ತಿಗೆದಾರರು ಸತಾಯಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ದಿನನಿತ್ಯ ಬಳಸುವ ಅಡುಗೆ ಅನಿಲ ಹಾಗೂ ದಿನಸಿ ಸಾಮಗ್ರಿಗಳ ಬೆಲೆ ಗಗನಕ್ಕೇರಿರುವುದರಿಂದ ಕಾರ್ಮಿಕ ಮಹಿಳೆಯರಿಗೆ ನುಂಗಲಾರದ ತುತ್ತಾಗಿದೆ. ವಿವಿಧ ಸ್ತ್ರೀಶಕ್ತಿ ಗುಂಪುಗಳಲ್ಲಿ ಪ್ರತಿವಾರ ಸಾಲ ಮರುಪಾವತಿಸಬೇಕು. ಪ್ರತಿ ತಿಂಗಳು ಮನೆ ಬಾಡಿಗೆ ಪಾವತಿಸಬೇಕು. ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಸಂಬಳ ಮಂಜೂರು ಮಾಡುವಂತೆ ಆಗ್ರಹಿಸಿದರು.