ಸಿಂದಗಿ: ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕು ಪಂಚಾಯಿತಿ ಕಚೇರಿ ಎದುರು ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು) ನಡೆಸುತ್ತಿರುವ ಅನಿರ್ದಿಷ್ಟ ಅವಧಿ ಧರಣಿ ಮಂಗಳವಾರ 14ನೇ ದಿನ ಪೂರೈಸಿದೆ.
ಅಣ್ಣಾರಾಯ ಈಳಗೇರ ಮಾತನಾಡಿ, ಗ್ರಾಪಂ ನೌಕರರು ಒಂದು ವರ್ಷದಿಂದಲೂ ಮೂಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ, ಧರಣಿ ನಡೆಸುತ್ತಿದ್ದಾರೆ. ಅಲ್ಲದೆ, ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಪಂ ಅಧಿಕಾರಿಗಳು ನೌಕರರ ಬೇಡಿಕೆಯನ್ನು ಈಡೇರಿಸುವಂತೆ ಆದೇಶ ಮಾಡಿದ್ದರೂ ಸ್ಥಳೀಯ ಅಭಿವೃದ್ಧಿ ಅಧಿಕಾರಿಗಳು ಮೇಲಧಿಕಾರಿಗಳ ಆದೇಶ ಪಾಲಿಸದೆ ಬಡ ನೌಕರರ ಹೊಟ್ಟೆ ಮೇಲೆ ಬರೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾಪಂ ಅಧಿಕಾರಿ ಮಟ್ಟದಲ್ಲೇ ಬೇಡಿಕೆಗಳನ್ನು ಈಡೇರಿಸಬಹುದು. ಕೂಡಲೇ ಪಿಡಿಒಗಳು ನಮ್ಮ ಬೇಡಿಕೆ ಈಡೇರಿಸದೆ ಹೋದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಧರಣಿಯಲ್ಲಿ ಅಧ್ಯಕ್ಷ ಎಂ.ಕೆ.ಚಳ್ಳಗಿ, ಕಾರ್ಯದರ್ಶಿ ಎಂ.ಎಸ್.ಕೊಂಡಗೂಳಿ, ಖಜಾಂಚಿ ಎಂ.ಎಂ.ಹುಣಶ್ಯಾಳ, ದೇವರಹಿಪ್ಪರಗಿ ಅಧ್ಯಕ್ಷ ಶಿವಾನಂದ ಬಿರಾದಾರ, ಎಂ.ಜಿ.ಪರಗೊಂಡ, ಮಾನಯ್ಯ ಮಠ, ಪ್ರಕಾಶ ವಾಲಿಕಾರ, ಧರೆಪ್ಪ ಕಕ್ಕಳಮೇಲಿ, ಸುಭಾಷ ನಾಯ್ಕೋಡಿ, ಎಂ.ಎಸ್.ನಾಯ್ಕೋಡಿ, ಈರಮ್ಮ ಬಾಣಿ, ಶರಣಪ್ಪ ಹರಿಜನ, ಶಿವಪ್ಪ ಬಾಸಗಿ, ಚಾಂದಬಾಷಾ ದರ್ಗಾ, ಮಲಕು ಸುಂಗಠಾಣ ಇದ್ದರು.