ದೇವದುರ್ಗ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾ ವಹಿಸಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಎಸ್ಪಿ ಬಿ.ನಿಖಿಲ್ ಸೂಚಿಸಿದರು.
ಗಬ್ಬೂರು, ಮಸರಕಲ್ ಗ್ರಾಮದಲ್ಲಿನ ಮತಗಟ್ಟೆಗಳಿಗೆ ಭೇಟಿ ನೀಡಿ ಬುಧವಾರ ಮಾತನಾಡಿದರು. ರಾಯಚೂರು ಕ್ಷೇತ್ರದಲ್ಲಿ ಮೇ 7ರಂದು ಮತದಾನ ನಡೆಯಲಿದೆ. ಅಧಿಕಾರಿಗಳು ದಿನದ 24 ಗಂಟೆ ಎಚ್ಚರ ವಹಿಸಬೇಕು. ದೇವದುರ್ಗ ತಾಲೂಕಿನ ಗಬ್ಬೂರು, ಹೂವಿನಹೆಡಗಿ ಹಾಗೂ ತಿಂಥಣಿ ಬ್ರಿಡ್ಜ್ ಚೆಕ್ಪೋಸ್ಟ್ನಲ್ಲಿ ವಾಹನಗಳ ತಪಾಸಣೆ ಸಮರ್ಪಕವಾಗಿ ನಡೆಸಬೇಕು. ಚೆಕ್ಪೋಸ್ಟ್ನಲ್ಲಿ ದಿನದ 24 ಗಂಟೆ ಸಿಬ್ಬಂದಿ ಇರುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಎಲ್ಲ ಗ್ರಾಮಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯಮಿತವಾಗಿ ಬೀಟ್ ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಯಾವುದೇ ಫೋನ್ ಬಂದರೂ ನಿರ್ಲಕ್ಷ್ಯ ಮಾಡದೆ ಸ್ಪಂದಿಸಬೇಕು. ಸಿಬ್ಬಂದಿಗೆ ಅಗತ್ಯ ಸಲಹೆ, ಸೂಚನೆ ನೀಡುವ ಜತೆಗೆ ಕೆಲಸಕ್ಕೆ ಸರಿಯಾಗಿ ನಿಯೋಜನೆ ಮಾಡಬೇಕು ಎಂದು ಎಸ್ಪಿ ಸೂಚಿಸಿದರು. ಪಿಐ ಅಶೋಕ ಸದಲಗಿ, ಸಿಪಿಐ ಸುಭಾಷ್ಚಂದ್ರ, ಗಬ್ಬೂರು ಪಿಎಸ್ಐ ನಿಂಗಯ್ಯ ಬುರ್ಲಿ, ಜಾಲಹಳ್ಳಿ ಪಿಎಸ್ಐ ಬಸವರಾಜ ನಾಯಕ ಇದ್ದರು.