ಬೆಂಗಳೂರು: ಚುನಾವಣೆ ಸಮೀಪಿಸಿದಂತೆ ಪಕ್ಷಕ್ಕೆ ರೌಡಿಗಳ ಸೇರ್ಪಡೆ, ಬಿಬಿಎಂಪಿಯಲ್ಲಿ ಮತದಾರರ ಚೀಟಿ ಅಕ್ರಮ, ಹೀಗೆ ಅನೇಕ ಸಮಸ್ಯೆಗಳ ಸುಳಿಯಲ್ಲಿ ರಾಜ್ಯ ಬಿಜೆಪಿ ಸಿಲುಕಿಕೊಂಡಿದೆ. ಆದರೂ ರಣೋತ್ಸಾದಲ್ಲೇ ಇರುವ ಬಿಜೆಪಿ ಫೇಸ್ಬುಕ್ನಲ್ಲಿ ಕಾಂಗ್ರೆಸ್ ವಿರುದ್ಧ ಫುಲ್ ಫೈರಿಂಗ್ ನಡೆಸಿತ್ತು. ಅಷ್ಟೇ ಸಾಲಲ್ಲ ಎಂದು ಡಿ.ಕೆ ಶಿವಕುಮಾರ್ರನ್ನು ಕೊತ್ವಾಲನ ಬಲಗೈ ಬಂಟ ಎಂದು ಕರೆದು ಬಿಟ್ಟಿತ್ತು. ಇದಾದ ಮೇಲೆ ಬಿಜೆಪಿಗೆ ರೌಡಿಗಳ ಸೇರ್ಪಡೆ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟರ್ನಲ್ಲಿ ಕಿಡಿಕಾರಿದ್ದಾರೆ.
ರೌಡಿಗಳು ರಾಜಕೀಯ ಪ್ರವೇಶದ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದು ಸರಣಿ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಬಾಯಿ ಬಿಟ್ಟರೆ ಸಂಸ್ಕೃತಿ, ಆಚಾರ, ವಿಚಾರದ ಮಂತ್ರ ಉದುರಿಸುವ ಆರ್ಎಸ್ಎಸ್ ನಾಯಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಕರೆಸಿಕೊಂಡದ್ದು ರೌಡಿಮೋರ್ಚಾ ಕಟ್ಟಲು ಸಲಹೆ ನೀಡಲಿಕ್ಕಾಗಿಯೇ? ಆರ್ ಎಸ್ ಎಸ್ ಮೌನ ಸಮ್ಮತಿ ಲಕ್ಷಣವೇ? ‘ ಎಂದು ಫೈರಿಂಗ್ ನಡೆಸಿದ್ದಾರೆ.
‘ಗಣಿ ಲೂಟಿಕೋರ ರೌಡಿಗಳನ್ನು ಕಟ್ಟಿಕೊಂಡು ಅಧಿಕಾರಕ್ಕೆ ಬಂದಿದ್ದ ಬಿಜೆಪಿಯ ಮುಖ್ಯಮಂತ್ರಿಗಳು ಕೊನೆಗೆ ಜೈಲು ಪಾಲಾಗಬೇಕಾಯಿತು. ಈಗ ಹೊಸ ರೌಡಿಪಡೆ ಕಟ್ಟುತ್ತಿರುವುದು ಯಾರನ್ನು ಜೈಲಿಗೆ ಕಳಿಸಲು? ಸೋಲಿನ ಭೀತಿಯಲ್ಲಿರುವ ರಾಜ್ಯಬಿಜೆಪಿ ಬೀದಿ ರೌಡಿಗಳನ್ನು ಕಟ್ಟಿಕೊಂಡು ಚುನಾವಣೆ ಗೆಲ್ಲಲು ಹೊರಟಿದೆಯೆ? ಧರ್ಮ,ಸಂಸ್ಕೃತಿ ಬಗ್ಗೆ ಬೊಗಳೆ ಬಿಡುವ ಸಂಘ ಪರಿವಾರದ ನೈತಿಕ ಅಧ:ಪತನವಲ್ಲದೆ ಮತ್ತೇನು?’ ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.