ಬೆಂಗಳೂರು: ಬಿಜೆಪಿ ಪಕ್ಷಕ್ಕೆ ಕ್ರಿಮಿನಲ್ ಹಿನ್ನಲೆ ವ್ಯಕ್ತಿಗಳು ಸೇರ್ಪಡೆಯಾಗುತ್ತಿದ್ದಾರೆ ವಿಚಾರವಾಗಿ ಉಂಟಾದ ಸನ್ನಿವೇಶಗಳು ವಿಪಕ್ಷಗಳ ಟೀಕೆಗೆ ಅಸ್ತ್ರವಾಗಿ ಬಳಕೆಯಾಗಿತ್ತು. ಅದರಂತೆ ಕಾಂಗ್ರೆಸ್ ನಿರಂತರ ಟ್ವೀಟ್ ಮೂಲಕ ಬಿಜೆಪಿಯನ್ನು ಪ್ರಶ್ನಿಸುತ್ತಾ ಬಂದಿತ್ತು.
ಕಾಂಗ್ರೆಸ್ ಸರ್ಕಾರವಿದ್ದಾಗ ರೌಡಿಗಳನ್ನು ಕಂಡರೆ ಪೊಲೀಸರು ಒದ್ದು ಎಳೆದು ತರುತ್ತಿದ್ದರು. ಆದರೆ ಬಿಜೆಪಿ ಅಧಿಕಾರಾವಧಿಯಲ್ಲಿ ರೌಡಿ ರಾಜಕೀಯದಿಂದಾಗಿ ಅದೇ ರೌಡಿಗಳಿಗೆ ಪೊಲೀಸರು ಸೆಲ್ಯೂಟ್ ಹೊಡೆಯುವಂತಾಗಿದೆ. ರೌಡಿಗಳ ವಿರುದ್ಧ ಕಾರ್ಯಾಚರಣೆ ನಡೆಸುವ ಪೊಲೀಸರ ನೈತಿಕ ಸ್ಥೈರ್ಯವನ್ನೇ ಬಿಜೆಪಿ ಕಿತ್ತುಕೊಂಡಿದೆ. ಇಂದಿನ ರೌಡಿಗಳೇ ಮುಂದಿನ ಬಿಜೆಪಿ ನಾಯಕರು ಎಂಬಂತಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.
ಇದೀಗ ಕಾಂಗ್ರೆಸ್ ವಿರುದ್ಧ ಬಿಜೆಪಿ ಫೇಸ್ಬುಕ್ ಪೋಸ್ಟ್ ಒಂದನ್ನು ಹಾಕಿ, ಡಿ.ಕೆ ಶಿವಕುಮಾರ್ ಅವರನ್ನು ಪುಡಿ ರೌಡಿ ಎಂದು ಟೀಕಿಸಿದೆ.
ಬಿಜೆಪಿ ತನ್ನ ಫೇಸ್ಬುಕ್ ಖಾತೆಯಲ್ಲಿ, ರೌಡಿಗಳ ಕಿಂಗ್ ಕೊತ್ವಾಲನ ಚಹಾ ಲೋಟ ಎತ್ತುತ್ತಿದ್ದ ಪುಡಿ ರೌಡಿ ಡಿ. ಕೆ. ಶಿವಕುಮಾರ್ ಅವರನ್ನೇ ರಾಜ್ಯಾಧ್ಯಕ್ಷನನ್ನಾಗಿ ಮಾಡಿರೋ ಕಾಂಗ್ರೆಸ್ಗೆ ಬಿಜೆಪಿಯ ಬಗ್ಗೆ ಮಾತಾಡೋ ನೈತಿಕೆಯಿದೆಯಾ ಎಂದು ಪ್ರಶ್ನಿಸಿಕೊಳ್ಳಲಿ. ಅಧ್ಯಕ್ಷರಿಂದ ಆರಂಭವಾಗುವ ಇವರ ಕ್ರೂರ ಪಟ್ಟಿ ಮೊನ್ನೆ ಮೊನ್ನೆ ಬಾರಲ್ಲಿ ಅಮಾಯಕರಿಗೆ ಹೊಡೆದ ಮರಿ ರೌಡಿ ಮಹಮ್ಮದ್ ನಲಪಾಡ್ವರೆಗೂ ಇದೆ.
https://twitter.com/BJP4Karnataka/status/1599040446902464512
ರೌಡಿಗಳ ಬಗ್ಗೆ ಮಾತಾಡುವ ಕಾಂಗ್ರೆಸ್ ಕುಖ್ಯಾತ ಕೊಲೆ ಅರೋಪಿ ವಿನಯ್ ಕುಲಕರ್ಣಿ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ‘ಕೆಜೆ ಜಾರ್ಜ್ ನನ್ನ ಸಾವಿಗೆ ಕಾರಣ’ ಎಂದು ಜೀವಬಿಟ್ಟ ಡಿವೈಎಸ್ಪಿ ಗಣಪತಿ ನೆನಪಿದೆಯೇ? ಅಷ್ಟೇ ಅಲ್ಲ, ಕಾಂಗ್ರೆಸ್ನಲ್ಲಿ ದರೋಡೆಕೋರರೂ ಇದ್ದಾರೆ.
ಜಮೀರ್ ಅಹ್ಮದ್ ವಿರುದ್ಧ 2011 ರಲ್ಲಿ ದರೋಡೆ ಪ್ರಕರಣ ದಾಖಲಾಗಿ ವಾರೆಂಟ್ ನೀಡಲಾಗಿತ್ತು. ಎಲ್ಲಿ ತಮ್ಮ ಮನೆ ದರೋಡೆ ಮಾಡಿಬಿಟ್ರೆ ಎಂದು ಡಿ. ಕೆ. ಶಿವಕುಮಾರ್ ಸುಮ್ಮನಿದ್ದಾರೆಯೇ? ಪಿಎಸ್ಐ ಟಿ. ಆರ್. ಶ್ರೀನಿವಾಸ್ರನ್ನು ಸಾರ್ವಜನಿಕವಾಗಿ ಅವಮಾನಿಸುವುದರ ಜೊತೆಗೆ ಡಿ.ಕೆ. ಸುರೇಶ್. ಜೀವ ಬೆದರಿಕೆಯೂ ಹಾಕುತ್ತಾರೆ ಎಂದು ಬಿಜೆಪಿ ಬರೆದುಕೊಂಡಿದೆ.
ಬೆಂಗಳೂರಿನ ಸಕಲ ರೌಡಿಗಳನ್ನೂ ಪೋಷಿಸಿ, ಪ್ರೋತ್ಸಾಹಿಸುತ್ತಿರುವ ರಾಮಲಿಂಗ ರೆಡ್ಡಿ ಪ್ರತಿ ಸಲ ಎಲೆಕ್ಷೆನ್ನಲ್ಲಿ ಗೆಲ್ಲುತ್ತಿರುವುದೇ ರೌಡಿಗಳ ಕೃಪೆಯಿಂದ. ರೌಡಿ ನಾಗನ ಜೊತೆ ರಾಮಲಿಂಗ ರೆಡ್ಡಿ ಸಾಹೇಬರ ಸಂಬಂಧವೇನು ಎಂಬುದನ್ನು ಮಾಧ್ಯಮಗಳೇ ಬಿಚ್ಚಿಟ್ಟಿದ್ದಾವೆ. ಅವರ ಮಗಳು ಸೌಮ್ಯಾ ರೆಡ್ಡಿಯವರು ಹೇಗೆ ಗೆದ್ದರು ಎಂಬುದನ್ನು ನಾವು ಹೇಳಲು ಹೋಗುವುದಿಲ್ಲ.
ರೌಡಿಗಳು, ಕಳ್ಳರು, ಕೊಲೆಗಾರರು, ದರೋಡೆಕೋರರು, ಭ್ರಷ್ಟಾಚಾರಿಗಳೇ ನಾಯಕರಾಗಿರೋ ಕಾಂಗ್ರೆಸ್ ರೌಡಿ ರಾಜ್ಯದ ಬಗ್ಗೆ ಭಾಷಣ ಬಿಗಿಯುತ್ತಿರುವುದು, ಅಲ್ಲೆಲ್ಲೋ ಇರುವ ಅಲ್ಖೈದಾದವನ್ನು ಶಾಂತಿಯ ಸಂದೇಶ ಸಾರಿದಷ್ಟೇ ಅದಕ್ಕೆ ಪ್ರಾಮುಖ್ಯತೆ. ಭಯದಿಂದ ಅಣ್ಣಾ ಎಂದು ಕರೆಸಿಕೊಳ್ಳುವ ಡಿಕೆಶಿ ಪಟಾಲಮ್ಮಿನಿಂದ ಬಿಜೆಪಿಗೆ ಪಾಠ ಬೇಕಾಗಿಲ್ಲ ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದೆ.