ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ವಿಶ್ವಾಸ — ಬಿಜೆಪಿಯತ್ತ ಜನರ ಒಲವು
ವಿಜಯವಾಣಿ ಸುದ್ದಿಜಾಲ ಉಡುಪಿ
ಲೋಕಸಭಾ ಚುನಾವಣೆಯಲ್ಲಿ ಮತದಾರರ ಒಲವು ಬಿಜೆಪಿ ಪರ ಇರುವುದು ಕಂಡುಬಂದಿದ್ದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಮಲ ಅರಳುವ ವಿಶ್ವಾಸ ನನಗಿದೆ ಎಂದು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯ ಮತಗಟ್ಟೆಗಳಿಗೆ ಮಾಧ್ಯಮದವರು ಪ್ರದಣೆ ಹಾಕುವ ವೇಳೆ ಕೋಟದ ಗಿಳಿಯಾರು ಶಾಂಭವಿ ಶಾಲೆಯ ಮತಗಟ್ಟೆ ಸಮೀಪದಲ್ಲಿ ಬಿಜೆಪಿ ಕಾರ್ಯಕರ್ತರು ತೆರೆದಿದ್ದ ಬೂತ್ನಲ್ಲಿ ಕುಳಿತಿದ್ದ ಅವರು ಮಾತನಾಡಿ, ಶಾಂತಿಯುತವಾಗಿ ಕ್ಷೇತ್ರದಲ್ಲಿ ಮತದಾನ ನಡೆದಿದೆ. ಜನರು ಸ್ವಯಂ ಪ್ರೇರಣೆಯಿಂದ ಹಕ್ಕು ಚಲಾಯಿಸಿದ್ದಾರೆ. ಮತದಾರರು ಈ ಬಾರಿ ಜಾಗೃತರಾಗಿದ್ದಾರೆ. ದೇಶದ ಭವಿಷ್ಯ ರೂಪಿಸುವವರ ಪರವಾಗಿ ಮತ ಚಲಾಯಿಸಿದ್ದಾರೆ ಎಂಬ ಅಚಲ ನಂಬಿಕೆ ನನಗಿದೆ. ಮತದಾರರು ನನ್ನ ಕೈ ಬಿಡಲಾರರು ಎಂದರು.
ಮತದಾನ ದಿನದ ಬೆಳಗ್ಗೆ ಕುಂದಾಪುರ ತಾಲೂಕಿನ 35ಕ್ಕೂ ಅಧಿಕ ಬೂತ್ಗಳಿಗೆ ಭೇಟಿ ನೀಡಿದ್ದೇನೆ. ಮಧ್ಯಾಹ್ನದ ಬಳಿಕ ಉಡುಪಿ ತಾಲೂಕಿನ ಸಾಧ್ಯವಾದಷ್ಟು ಬೂತ್ಗಳಿಗೆ ಭೇಟಿ ನೀಡುತ್ತೇನೆ. ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡುತ್ತಿಲ್ಲ ಎಂದು ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದೇನೆ ಎಂದರು.
ನುಡಿದಂತೆ ನಡೆದವರು ಶ್ರೀನಿವಾಸ ಶೆಟ್ಟಿ
ಬಿಜೆಪಿಯ ಮಾಜಿ ಶಾಸಕ ಹಾಲಾಡಿಯ ಶ್ರೀನಿವಾಸ ಶೆಟ್ಟಿ ಅವರು ನುಡಿದಂತೆ ನಡೆಯುವವರು. ಬಿಜೆಪಿಗೆ ಮತ ನೀಡುವುದಾಗಿ ಭರವಸೆ ನೀಡಿದ್ದಾರೆ. ಆ ಭರವಸೆಯಂತೆಯೇ ಅವರು ನಡೆದಿರುತ್ತಾರೆ ಎಂದು ಕೋಟ ತಿಳಿಸಿದರು.