ರಾಯಚೂರು: ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗುವ ಆಶಾ ಕಾರ್ಯಕರ್ತೆಯರಿಗೆ ಕುಡಿಯುವ ನೀರು, ಊಟದ ಭತ್ಯೆಯನ್ನು ಖಾತ್ರಿ ಪಡಿಸುವಂತೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಒತ್ತಾಯಿಸಿದೆ.
ಸಂಘದ ನಿಯೋಗ ಜಿಲ್ಲಾಕಾರಿ ಚಂದ್ರಶೇಖರ ನಾಯಕಗೆ ಶನಿವಾರ ಮನವಿ ಸಲ್ಲಿಸಿ, ಹಿಂದಿನ ಚುನಾವಣೆಗಳಲ್ಲಿ ಕಾರ್ಯನಿರ್ವಹಿಸಿದ ಕಾರ್ಯಕರ್ತೆಯರಿಗೆ ಸಂಭಾವನೆ ಪಾವತಿ ಮಾಡಲಾಗಿಲ್ಲ ಎಂದು ದೂರಿದರು.
ಕಳೆದ ಎಲ್ಲ ಚುನಾವಣೆಗಳಲ್ಲಿ ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳಲಾಗಿದೆ. ಪ್ರತಿ ದಿನ 700 ರೂ. ಭತ್ಯೆ ನೀಡಬೇಕು ಎಂದು ತೀರ್ಮಾನವಿದ್ದರೂ ಭತ್ಯೆ ನೀಡದೆ ಹಾಗೂ ತಿಂಡಿ, ಊಟವನ್ನು ನೀಡದೆ ದುಡಿಸಿಕೊಳ್ಳಲಾಗಿದೆ. ಈ ಬಾರಿ ಭತ್ಯೆ ವಿತರಣೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಚಂದ್ರಶೇಖರ ನಾಯಕ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಎಲ್ಲರಿಗೂ ನೀರು, ನೆರಳು, ಊಟದ ವ್ಯವಸ್ಥೆ ಮಾಡಲಾಗುವುದು. ಭತ್ಯ ನೀಡುವ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ಸಂಘದ ಜಿಲ್ಲಾಧ್ಯಕ್ಷ ಎನ್.ಎಸ್.ವೀರೇಶ, ಗೌರವಾಧ್ಯಕ್ಷ ಚನ್ನಬಸವ ಜಾನೇಕಲ್, ಆಶಾ ಕಾರ್ಯಕರ್ತೆಯರಾದ ಶಾರದಾ, ಅಮರಜ್ಯೋತಿ, ಯಲ್ಲಮ್ಮ, ದೇವಮ್ಮ, ಈರಮ್ಮ ಇದ್ದರು.