ವಿಜಯಪುರ: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಎಲ್ಲೆಡೆ ಶ್ರದ್ಧಾಂಜಲಿ, ಸಂತಾಪ ಹರಿದು ಬರುತ್ತಿವೆ. ವಿಜಯಪುರದ ಎಲ್ಲಾ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇಂದು ಸಂಜೆ ಅಂತಿಮ ವಿಧಿವಿಧಾನ ನಡೆಯಲಿದೆ.
ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ವಿಧಾನಸಭೆ ಕ್ಷೇತ್ರದ ಶಾಸಕ ವಿಕ್ರಮಸಿಂಹ (ದಾದಾ) ಸಾವಂತ ಕೂಡ ಸಿದ್ದೇಶ್ವರ ಶ್ರೀಗಳ ಅಗಲಿಕೆಗೆ ಕಂಬನಿ ಮಿಡಿದರು. ಮಂಗಳವಾರ ನಸುಕಿನ ಜಾವದಲ್ಲಿಯೇ, ತಮ್ಮ ಅಪಾರ ಬೆಂಬಲಿಗರೊಡನೆ ಪೂಜ್ಯರ ಅಂತಿಮ ದರ್ಶನಕ್ಕೆ ಧಾವಿಸಿದ್ದರು. ಪೂಜ್ಯರ ಆಶೀರ್ವಾದ ಪಡೆದು, ಅವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ‘ಪರಮ ಪೂಜ್ಯ ಸಿದ್ದೇಶ್ವರ ಶ್ರೀಗಳು ಮರಾಠಿಯಲ್ಲಿ ಅದ್ಭುತ ಪ್ರವಚನ ನೀಡುತ್ತಿದ್ದರು. ಆ ಮೂಲಕ ಸಮಾಜದ ಒಳಿತಿಗೆ ಶ್ರಮಿಸಿದವರು. ಗಡಿಭಾಗದಲ್ಲಿ ನಿರಂತರ ಪ್ರವಚನ ನಡೆಸುತ್ತಿದ್ದರು. ನಾವೆಲ್ಲ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದೆವು. ಇದೀಗ ಅವರು ಇಲ್ಲ ಎಂಬ ಸುದ್ದಿ ಅರಗಿಸಿಕೊಳ್ಳಲಾಗುತ್ತಿಲ್ಲ. ಯಾವತ್ತು ಸದ್ಭಕ್ತರು ಅವರ ಸಂದೇಶ ಪಾಲಿಸಬೇಕು ಎಂದರು.
ಕರ್ನಾಟಕ-ಮಹಾರಾಷ್ಟ್ರದ ಗಡಿ ತಕರಾರುಗಳ ಈ ಸಂದರ್ಭದಲ್ಲಿ, ಮಹಾರಾಷ್ಟ್ರ ಶಾಸಕ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ ಪಡೆದು, ಶ್ರೀಗಳನ್ನು ಪ್ರಶಂಸಿಸಿದ್ದು ವಿಶೇಷ.