ಬೆಂಗಳೂರು: ನಾನು ಹಿಂದು, ನಾನು ದೇವರ ವಿರೋಧಿಯೂ ಅಲ್ಲ ಎಂದು ಸ್ಪಷ್ಟನೆ ನೀಡಿದ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಡಿಸೆಂಬರ್ ತಿಂಗಳಿಂದ ನಾನು ಮಾಂಸಾಹಾರ ಸೇವನೆಯನ್ನೂ ಬಿಟ್ಟಿದ್ದೇನೆ ಎಂದು ವಿಧಾನಸಭೆಯಲ್ಲಿ ಹೇಳಿದ್ದಾರೆ.
ನಾನು ಹಿಂದೂ ವಿರೋಧಿ ಎಂದು ಬಿಜೆಪಿಯವರು ಮುಗಿ ಬೀಳುತ್ತಾರೆ. ಸಿದ್ದರಾಮಯ್ಯ ಹಿಂದು ವಿರೋಧಿ ಎಂದು ಬಿಂಬಿಸಲು ಹೋಗುತ್ತಾರೆ. ನಾನು ಹಿಂದು ಅಲ್ಲವಾದರೆ ನನ್ನ ತಂದೆ ತಾಯಿ ಸಿದ್ದರಾಮಯ್ಯ ಎಂದು ಏಕೆ ಹೆಸರಿಡುತ್ತಿದ್ದರು? ಎಂದು ಪ್ರಶ್ನಿಸಿದರು.
ವಿವೇಕಾನಂದರೇ ಮನುವಾದ, ಪುರೋಹಿತ ಶಾಹಿ ಈ ದೇಶಕ್ಕೆ ಶಾಪ ಎಂದು ಹೇಳಿದ್ದರು. ನಾನು ಗಾಂಧಿ, ವಿವೇಕಾನಂದರು ಪ್ರತಿಪಾದಿಸಿದ ಹಿಂದುತ್ವದಲ್ಲಿ ನಂಬಿಕೆ ಇಟ್ಟಿದ್ದೇನೆ. ಬಹುತ್ವದಲ್ಲಿ ನಂಬಿಕೆ ಹೊಂದಿದ, ಎಲ್ಲ ಜಾತಿ, ಸಮುದಾಯಗಳನ್ನು ಸಮಾನವಾಗಿ ಗೌರವಯುತವಾಗಿ ಕಾಣುವ ಹಿಂದುತ್ವದಲ್ಲಿ ನಂಬಿಕೆ ಇಟ್ಟಿದ್ದೇನೆ ಎಂದು ಸಮಾಜಾಯಿಷಿ ನೀಡಿದರು. ಶಸ ಚಿಕಿತ್ಸೆಗೆ ಒಳಗಾದ ಕಾರಣಕ್ಕೆ ಡಿಸೆಂಬರ್ ಬಳಿಕ ಮಾಂಸಾಹಾರ ತ್ಯಜಿಸಿದ್ದೇನೆ ಎಂದು ಹೇಳಿದರು.
ಬಿಜೆಪಿಯವರ ಹಿಂದುತ್ವ ಬೇರೆ. ಅಮಿತ್ ಷಾ ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿದಾಗ ಈ ಬಾರಿ ಚುನಾವಣೆ ಅಬ್ಬಕ್ಕ ವರ್ಸಸ್ ಟಿಪ್ಪು ಎಂದು ಹೇಳುತ್ತಾರೆ. ಇದೆಂಥಾ ರಾಜಕೀಯ ಸಿದ್ಧಾಂತ. ಭಾವನಾತ್ಮಕ ವಿಚಾರ ಮುನ್ನೆಲೆಗೆ ತರುವ ಹಿಡನ್ ಅಜೆಂಡಾ ಹೊಂದುವುದಕ್ಕೆ ನಾಚಿಕೆ ಆಗುವುದಿಲ್ಲವೇ ಎಂದು ಟೀಕಿಸಿದರು.