ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ ಹಿಜಾಬ್ಗೆ ಮತ್ತೆ ಅನುಮತಿ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟಿರುವ ಹೇಳಿಕೆ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಕೂಡಲೇ ಸಿಎಂ ತಮ್ಮ ಹೇಳಿಕೆಯನ್ನು ಹಿಂಪಡೆದುಕೊಳ್ಳಬೇಕು ಎಂದು ಬಿಜೆಪಿ ಕಿಡಿಕಾರಿದೆ.
ಶಾಲೆ-ಕಾಲೇಜುಗಳಲ್ಲಿ ಮಕ್ಕಳು ಸಮಾನತೆಯಿಂದ ಕೂಡಿರಬೇಕು ಎಂದೇ ಸಮವಸ್ತ್ರ ನೀತಿಯನ್ನು ಜಾರಿಗೊಳಿಸಲಾಗಿದೆ. ಇದನ್ನು ಸುಪ್ರೀಂಕೋರ್ಟ್ ಸಹ ಎತ್ತಿ ಹಿಡಿದಿದೆ. ಆದರೆ, ಶಾಲಾ ವಿದ್ಯಾರ್ಥಿಗಳ ಮನಸ್ಸಲ್ಲಿ ಸಮವಸ್ತ್ರ ವಿಚಾರವಾಗಿ ಸಿಎಂ ಬೇಧವನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಕಿಡಿಕಾರಿದೆ. ಪಿಎಫ್ಐ ಗೂಂಡಾಗಳು, ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲು ವೋಟ್ ಬ್ಯಾಂಕ್ಗಾಗಿ ಸಿದ್ದರಾಮಯ್ಯ ಅವರು ಸಂವಿಧಾನವನ್ನೇ ತಿದ್ದುಪಡಿ ಮಾಡಲು ಹೊರಟಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಅಂತ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಬಿಜೆಪಿ ಪೋಸ್ಟ್ ಮಾಡಿದೆ.
ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ
ಹಿಜಾಬ್ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಹಿಜಾಬ್ ನಿಷೇಧ ಹಿಂಪಡೆದುಕೊಳ್ಳುವ ಸಿಎಂ ಹೇಳಿಕೆ ಶಿಕ್ಷಣ ಸಂಸ್ಥೆಗಳಲ್ಲಿರುವ ಜಾತ್ಯಾತೀತೆಯ ಬಗ್ಗೆ ಪ್ರಶ್ನಿಸುವಂತಿದೆ. ಶಿಕ್ಷಣ ಕೇಂದ್ರ/ಸಂಸ್ಥೆಗಳಲ್ಲಿ ಧಾರ್ಮಿಕ ಉಡುಗೆಗೆ ಅವಕಾಶ ನೀಡಿದರೆ ಯುವ ಜನಾಂಗವನ್ನು ಧಾರ್ಮಿಕವಾಗಿ ವಿಭಜಿಸಲು ಉತ್ತೇಜನೆ ನೀಡಿದಂತಾಗುತ್ತದೆ. ಇದು ಅಂತರ್ಗತ ಕಲಿಕೆಯ ವಾತಾವರಣವನ್ನು ತಡೆಯುವ ಸಾಧ್ಯತೆ ಇರುತ್ತೆ. ವಿಭಜನೆಗೆ ಅವಕಾಶ ನೀಡುವ ಬದಲು ಶಿಕ್ಷಣಕ್ಕೆ ಆದ್ಯತೆ ನೀಡುವುದು ಮುಖ್ಯವಾಗುತ್ತದೆ. ಧಾರ್ಮಿಕ ಆಚರಣೆಗಳ ಪ್ರಭಾವವಿಲ್ಲದೆ ವಿದ್ಯಾರ್ಥಿಗಳು ಶಿಕ್ಷಣದ ಮೇಲೆ ಕೇಂದ್ರೀಕರಿಸುವ ವಾತಾವರಣವನ್ನು ಬೆಳೆಸುವುದು ನಿರ್ಣಾಯಕವಾಗಿದೆ ಎಂದು ವಿಜಯೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
CM Siddaramaiah's decision to withdraw the hijab ban in educational institutions raises concerns about the secular nature of our educational spaces.
By allowing religious attire in educational institutions @siddaramaiah govt is promoting dividing young minds along religious…
— Vijayendra Yediyurappa (@BYVijayendra) December 22, 2023
ಸಿದ್ದರಾಮಯ್ಯ ಹೇಳಿದ್ದೇನು?
ಉಡುಪು ಮತ್ತು ಊಟ ಅವರವರ ಇಷ್ಟ, ನಾನ್ಯಾಕೆ ಇದನ್ನ ಅಡ್ಡಿಪಡಿಸಲಿ ಅಂತ ಮೈಸೂರಿನ ಕವಲಂದೆಯಲ್ಲಿ ನಡೆದ ಕಾರ್ಯಕ್ರಮವೊಂದ್ರಲ್ಲಿ ಘೋಷಿಸಿದ್ದಾರೆ. ಈಗ ಹಿಜಾಬ್ ಹಾಕ್ಕೊಂಡು ಎಲ್ಲಿಗೆ ಬೇಕಾದ್ರೂ ಹೋಗಬಹುದು ಆದೇಶ ವಾಪಸ್ ತೆಗೆದುಕೊಳ್ಳಲು ಹೇಳ್ತೀನಿ ಎಂದು ಹೇಳಿದ್ದಾರೆ.