ಮಲೇಬೆನ್ನೂರು: ವಿಜಯದಶಮಿ ಅಂಗವಾಗಿ ಹರಿಹರ ತಾಲೂಕು ಮಲೆಬೆನ್ನೂರಿನಲ್ಲಿ ಸೋಮವಾರ ಬಸವೇಶ್ವರ ಮತ್ತು ಬೀರಲಿಂಗೇಶ್ವರ ಸ್ವಾಮಿ ಕಾರ್ಣಿಕೋತ್ಸವ ಜರುಗಿತು.
‘ಭೂ ಲೋಕ ನಡುಗೀತು, ಭೂಮಿ ಬಾಯಿ ಬಿಟ್ಟೀತಲೇ ಪರಾಕ್, ಅದ್ದಕ್ಕೆ ನಾನಿದ್ದೀನಿ ಎಂದು ಆವಾಹಿತ ಗೊರವಪ್ಪ ಕಾರ್ಣಿಕದ ಸಂದೇಶ ನುಡಿದರು.
ಕರೊನಾ ಹಿನ್ನೆಲೆಯಲ್ಲಿ ಹೆಚ್ಚಿನ ಜನ ಸಮೂಹ ಸೇರುವುದಕ್ಕೆ ಅವಕಾಶ ನೀಡದೇ ನಿಗದಿತ ಅವಧಿಗೂ ಎರಡು ತಾಸು ಮೊದಲು ಧಾರ್ಮಿಕ ವಿಧಿವಿಧಾನ ಪೂರ್ಣಗೊಳಿಸಲಾಯಿತು.
ಗ್ರಾಮದೇವತೆಗಳಾದ ಏಕನಾಥೇಶ್ವರಿ, ಕೋಡಿಮೋಮೇಶ್ವರಿ, ಬಸವೇಶ್ವರ, ಬೀರಲಿಂಗೇಶ್ವರ ಜೋಡಿ ಆಂಜನೇಯ, ಹಟ್ಟಿ ದುರ್ಗಮ್ಮ, ಕಾಳಮ್ಮ, ಉತ್ಸವಮೂರ್ತಿಗಳು ಪಾಲ್ಗೊಂಡಿದ್ದವು.
ರೈತರು ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಬೆಳೆಗಳನ್ನು ಸಮರ್ಪಿಸಿದರು. ನಂತರ ಪರಸ್ಪರರು ಬನ್ನಿಪತ್ರೆ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯ ಕೋರಿದರು.