ನವದೆಹಲಿ: ಮಂಗಳವಾರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಡಿಎಂಕೆ ನಾಯಕರಿಗೆ ಹಿಂದಿ ಕಲಿಯುವಂತೆ ತಾಕೀತು ಮಾಡಿರುವುದು ಬೆಳಕಿಗೆ ಬಂದಿದೆ. ನಮ್ಮ ದೇಶ ಹಿಂದುಸ್ತಾನ ಹಿಂದಿ ನಮ್ಮ ರಾಷ್ಟ್ರಭಾಷೆ ಎಲ್ಲರೂ ಅದನ್ನು ಕಲಿಯುವುದು ಸೂಕ್ತ ಎಂದು ಡಿಎಂಕೆ ನಾಯಕರಿಗೆ ಹೇಳಿರುವುದಾಗಿ ತಿಳಿದು ಬಂದಿದೆ.
ಮಂಗಳವಾರ ನವದೆಹಲಿಯಲ್ಲಿ ವಿಪಕ್ಷಗಳ ಇಂಡಿಯಾ ಒಕ್ಕೂಟದ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ನಿತೀಶ್ ಕುಮಾರ್ ಮಾತನಾಡಲು ಶುರು ಮಾಡಿದಾಗ ಡಿಎಂಕೆ ನಾಯಕರಾದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಡಿಎಂಕೆ ನಾಯಕ ಟಿ.ಆರ್ ಬಾಲು ಅವರು ನಿತೀಶ್ ಕುಮಾರ್ ಅವರ ಹಿಂದಿ ಭಾಷಣವನ್ನು ಇಂಗ್ಲೀಷ್ಗೆ ಭಾಷಾಂತರಿಸುವಂತೆ ಕೋರಿದ್ದರು.
ಇದನ್ನೂ ಓದಿ: ಭಾನುವಾರ ಸ್ವಯಂವರ ಪಾರ್ವತಿ ಯಾಗ; ಹಲಸೂರಿನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜನೆ
ಈ ವೇಳೆ ರಾಷ್ಟ್ರೀಯ ಜನತಾ ದಳದ ರಾಜ್ಯಸಭಾ ಸಂಸದ ಮನೋಜ್. ಕೆ. ಝಾ ಅವರು ನಿತೀಶ್ ಕುಮಾರ್ ಭಾಷಣವನ್ನು ಭಾಷಾಂತರಿಸಲು ಮುಂದಾಗಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ನಿತೀಶ್ ಕುಮಾರ್ ಹಿಂದಿ ನಮ್ಮ ರಾಷ್ಟ್ರ ಭಾಷೆ, ಅದನ್ನು ಕಲಿಯಿರಿ. ಎಲ್ಲವನ್ನು ಭಾಷಾಂತರ ಮಾಡುತ್ತಾ ಕೂರಲು ಆಗುತ್ತಾ ಎಂದು ಡಿಎಂಕೆ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ಭಾಷಾಂತರ ಕೇಳಿದ್ದಕ್ಕೆ ಕೋಪಗೊಂಡಿದ್ದ ನಿತೀಶ್ ಕುಮಾರ್ ಅವರನ್ನು ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಇತರೆ ನಾಯಕರು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೂ, ಅವರು ಸಮಾಧಾನಗೊಂಡಿಲ್ಲ ಎನ್ನಲಾಗಿದೆ.