ನರೇಗಲ್ಲ: ಹಾನಗಲ್ಲ ಕುಮಾರ ಶಿವಯೋಗಿಗಳ ಕೃಪಾಶೀರ್ವಾದದಿಂದ ಸ್ಥಾಪಿತವಾಗಿರುವ ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರವು ಈ ಭಾಗದ ಆರೋಗ್ಯ ದಾಸೋಹ ಮಂದಿರ ಎಂದು ಹೆಸರುವಾಸಿಯಾಗಿದೆ. ಶಾಖಾ ಶಿವಯೋಗಮಂದಿರದ ಶತಮಾನೋತ್ಸವ, ಶ್ರೀಮಠದ ನೂತನ ಕಟ್ಟಡ ಉದ್ಘಾಟನೆ ಹಾಗೂ ಶ್ರೀಗಳ ಪಟ್ಟಾಧಿಕಾರ ಕಾರ್ಯಕ್ರಮಗಳನ್ನು ವಿಧಾಯಕವಾಗಿ ಆಚರಿಸಬೇಕು ಎಂದು ಹಾಲಕೆರೆಯ ಡಾ. ಅಭಿನವ ಅನ್ನದಾನ ಸ್ವಾಮೀಜಿ ಹೇಳಿದರು.
ಸಮೀಪದ ನಿಡಗುಂದಿಕೊಪ್ಪ ಶಾಖಾ ಶಿವಯೋಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಶತಮಾನೋತ್ಸವ ಸಮಾರಂಭದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶ್ರೀಮಠದ ಪರಂಪರೆಯ ಎಲ್ಲ ಗುರುಗಳು ಅಧ್ಯಾತ್ಮ, ಆರೋಗ್ಯ ದಾಸೋಹಕ್ಕೆ ಮಹತ್ವ ನೀಡಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುವ ಗುರುತರ ಜವಾಬ್ದಾರಿ ನಿಯೋಜಿತ ಉತ್ತರಾಧಿಕಾರಿಗಳ ಮೇಲಿದೆ. ಶತಮಾನೋತ್ಸವದ ಸವಿ ನೆನಪಿಗಾಗಿ ಮಾ.27 ರಿಂದ ಏ.29 ವರೆಗೆ ಒಂದು ತಿಂಗಳ ಕಾಲ ಹತ್ತು ಹಲವು ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಹಾಲಕೆರೆಯ ಶ್ರೀಮಠದಿಂದ ಒಂದು ತಿಂಗಳ ಕಾಲ ಅನ್ನದಾಸೋಹ ಸೇವೆ ಕೈಗೊಳ್ಳಲಾಗುತ್ತದೆ. ಸುತ್ತಲಿನ ಗ್ರಾಮಗಳಲ್ಲಿ ಲಿಂಗಧಾರಣೆ, ರುದ್ರಾಕ್ಷಿ ಧಾರಣೆ, ಗಣ್ಯರಿಗೆ ಸನ್ಮಾನ ಸೇರಿ ಇತರೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಶತಮಾನೋತ್ಸವ ಸಮಾರಂಭವನ್ನು ಅವಿಸ್ಮರಣೀಯ ಕಾರ್ಯಕ್ರಮವಾಗಿಸಲು ಭಕ್ತರು ಮುಂದಾಗಬೇಕು ಎಂದರು. ನಿಯೋಜಿತ ಉತ್ತರಾಧಿಕಾರಿ ಸಿದ್ಧರಾಮ ದೇವರು, ಹಾಲಕೆರೆಯ ಮುಪ್ಪಿನ ಬಸವಲಿಂಗ ದೇವರು, ಕುರಗೋಡದ ಪರ್ವತ ದೇವರು, ಗದಗ ಚಂದ್ರಶೇಖರ ದೇವರು, ಬೂದಗುಂಪದ ವಿಜಯಪ್ರಭು ದೇವರು ಸಮ್ಮುಖ ವಹಿಸಿದ್ದರು. ಸಭೆಯಲ್ಲಿ 35ಕ್ಕೂ ಅಧಿಕ ಗ್ರಾಮಗಳ ಭಕ್ತರು ಉಪಸ್ಥಿತರಿದ್ದರು. ಶಿಕ್ಷಕ ಆರ್.ವಿ. ಬೆಲ್ಲದ ನಿರ್ವಹಿಸಿದರು.