More

    ಕಲಿತ ಶಾಲೆಯ ಋಣ ತೀರಿಸುವ ಕಾರ್ಯ ಶ್ರೇಷ್ಠ

    ಶಿರಹಟ್ಟಿ: ಹೆತ್ತ ತಂದೆ, ತಾಯಿ, ವಿದ್ಯೆ ನೀಡಿದ ಗುರು ಹಾಗೂ ಸಮಾಜದ ಋಣ ತೀರಿಸುವುದು ಪ್ರತಿಯೊಬ್ಬರ ಕರ್ತವ್ಯ. ಶಾಲೆಯ ಹಳೇ ವಿದ್ಯಾರ್ಥಿ, ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಗಣೇಶ ಬಸ್ತವಾಡಕರ್ ಅವರು ಮೂರು ಲಕ್ಷ ರೂ. ಬೆಲೆಬಾಳುವ ಕಲಿಕಾ ಉಪಕರಣಗಳನ್ನು ಶಾಲೆಗೆ ಕೊಡುಗೆಯಾಗಿ ನೀಡುವ ಮೂಲಕ ಶಾಲೆಯ ಋಣ ತೀರಿಸಲು ಯತ್ನಿಸಿರುವುದು ಸರ್ವಶ್ರೇಷ್ಠ ಕಾರ್ಯ ಎಂದು ಸ್ಥಳೀಯ ಮಠದ ಶ್ರೀ ಬಸವರಾಜ ಸ್ವಾಮೀಜಿ ಹೇಳಿದರು.
    ತಾಲೂಕಿನ ಬೆಳ್ಳಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಗೆ ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಗಣೇಶ ಬಸ್ತವಾಡಕರ ಕೊಡುಗೆಯಾಗಿ ನೀಡಿದ ಕಲಿಕಾ ಉಪಕರಣಗಳ ಹಸ್ತಾಂತರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
    ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಾಲೆ ಪ್ರಖ್ಯಾತಿ ಪಡೆದಿದೆ. ಇಂಥ ಶಾಲೆಯಲ್ಲಿ ವಿದ್ಯೆ ಸಂಪಾದಿಸಿ ಸದ್ಯ ಕೆನರಾ ಬ್ಯಾಂಕಿನಲ್ಲಿ ಉನ್ನತ ಹುದ್ದೆ ಅಲಂಕರಿಸಿರುವ ಗಣೇಶ ಬಸ್ತವಾಡಕರ ಸೇರಿ ಅನೇಕ ವಿದ್ಯಾರ್ಥಿಗಳು ಸರ್ಕಾರದ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಅಭಿಮಾನದ ಸಂಗತಿ ಎಂದರು.
    ಗಣೇಶ ಬಸ್ತವಾಡಕರ್ ಮಾತನಾಡಿ, ಕೆನರಾ ಬ್ಯಾಂಕಿನ ಸಿಎಸ್‌ಆರ್ ಅನುದಾನದಡಿ ಮಕ್ಕಳ ಕಲಿಕೆಗಾಗಿ ಸ್ಮಾರ್ಟ್ ಕ್ಲಾಸ್ ಕಿಟ್, ಟಿವಿ, ಲ್ಯಾಪ್‌ಟಾಪ್, ಸಿಸಿ ಕ್ಯಾಮರಾ ಇತ್ಯಾದಿ ನೀಡಲಾಗಿದೆ. ಈ ಉಪಕರಣಗಳನ್ನು ಶಿಕ್ಷಕರು ಸದ್ವಿನಿಯೋಗ ಮಾಡಿಕೊಂಡು ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಸಿದ್ಧಪಡಿಸಬೇಕು ಎಂದರು.
    ಎಸ್.ಬಿ. ಮಹಾಜನಶೆಟ್ಟರ ಮಾತನಾಡಿ, ಕಲಿತ ಶಾಲೆಯ ಋಣ ತೀರಿಸುವ ನಿಟ್ಟಿನಲ್ಲಿ ಗಣೇಶ ಬಸ್ತವಾಡಕರ ತೋರಿದ ಇಚ್ಛಾಶಕ್ತಿ ಹಾಗೂ ಅಭಿಮಾನ ಇತರರಿಗೆ ಪ್ರೇರಣಾದಾಯಕವಾಗಿದೆ ಎಂದರು.
    ಕೆನರಾ ಬ್ಯಾಂಕ್ ವಿಭಾಗೀಯ ಸಹ ವ್ಯವಸ್ಥಾಪಕ ಪಿ. ಶ್ರೀನಿವಾಸ, ಸ್ಥಳೀಯ ವ್ಯವಸ್ಥಾಪಕ ನರಸಿಂಹರಾಜು ಮಾತನಾಡಿದರು. ಇದೇ ವೇಳೆ ಗಣೇಶ ಬಸ್ತವಾಡಕರ ದಂಪತಿಯನ್ನು ಸನ್ಮಾನಿಸಲಾಯಿತು.
    ಗ್ರಾಪಂ ಅಧ್ಯಕ್ಷ ರಮೇಶ ನಿರ್ವಾಣಶೆಟ್ಟರ, ಉಪಾಧ್ಯಕ್ಷೆ ಗಂಗವ್ವ ತಳವಾರ, ಎಸ್‌ಡಿಎಂಸಿ ಅಧ್ಯಕ್ಷ ಕೊಟ್ರೇಶ ಬಣಗಾರ, ಶಿವನಗೌಡ ಪಾಟೀಲ, ಮೋಹನ ಗುತ್ತೆಮ್ಮನವರ, ಮಲ್ಲಯ್ಯ ಶೀಲವಂತಮಠ, ರಮೇಶ ಮಲ್ಲಾಡದ, ದಿಲ್‌ಶಾದಬಿ ಚೌರಿ, ರೇಣುಕಾ ಮಾಳಮ್ಮನವರ, ಬಿಆರ್‌ಸಿ ಅಧಿಕಾರಿ ಬಿ.ಎಸ್. ಭಜಂತ್ರಿ ಕೊಟ್ರೇಶ ಸಜ್ಜನರ, ಎಂ.ಬಿ. ಹಾವೇರಿ, ಎಸ್.ಎಫ್. ಮಠದ, ಗಿರೀಶರಡ್ಡಿ ಮೇಕಳಿ ಇತರರಿದ್ದರು. ಗ್ರಾಪಂ ಸದಸ್ಯ ತಿಮ್ಮರಡ್ಡಿ ಮರಡ್ಡಿ, ಗಿರೀಶ ಕೋಡಬಾಳ, ಸಂಜೀವ ಬೆಲಹುಣಶಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts