More

    ಶಿರಾಡಿ ಹೆದ್ದಾರಿಯ ದೋಣಿಗಾಲ್ ದುರಸ್ತಿ ಅಂತಿಮ ಹಂತಕ್ಕೆ

    ಸಕಲೇಶಪುರ/ಮಂಗಳೂರು: ರಾಷ್ಟ್ರೀಯ ಹೆದ್ದಾರಿ-75ರ ದುರಸ್ತಿ ಕಾಮಗಾರಿಯ ಪರೀಕ್ಷಾ ವರದಿ ಬಂದ ನಂತರ ಶಿರಾಡಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.

    ಭೂಕುಸಿತ ಸಂಭವಿಸಿರುವ ದೋಣಿಗಾಲ್ ಗ್ರಾಮ ಸಮೀಪದ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾಮಗಾರಿಯನ್ನು ಶನಿವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರೊಂದಿಗೆ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

    ತಿಂಗಳ ಹಿಂದೆ ಸುರಿದ ಮಳೆಗೆ ಹೆದ್ದಾರಿ ಬದಿಯ ಭೂಮಿ ಕುಸಿದಿದ್ದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದುರಸ್ತಿ ಕಾಮಗಾರಿ ಕೈಗೊಂಡಿದ್ದು, ಅಂತಿಮ ಹಂತಕ್ಕೆ ತಲುಪಿದೆ. ಸದ್ಯ ಕಳೆದೊಂದು ವಾರದಿಂದ 20 ಟನ್ ವರೆಗಿನ ವಾಹನಗಳ ಸಂಚಾರಕ್ಕೆ ಹಗಲು ವೇಳೆ ಅವಕಾಶ ನೀಡಲಾಗಿದೆ ಎಂದರು.

    ಭಾರಿ ವಾಹನಗಳ ಸಂಚಾರಕ್ಕೆ ಹಾಗೂ ರಾತ್ರಿ ವೇಳೆ ಸಂಚಾರಕ್ಕೆ ಅವಕಾಶ ಕಲ್ಪಿಸಲು ಈಗಾಗಲೇ ಹೆದ್ದಾರಿ ಇಲಾಖೆಯಿಂದ ದುರಸ್ತಿ ಕಾಮಗಾರಿ ಪರೀಕ್ಷಾ ವರದಿ ಕೇಳಿದ್ದು, ಇನ್ನೆರಡು ದಿನಗಳಲ್ಲಿ ಬರಲಿದೆ. ನಂತರ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

    ಬಳಿಕ ಬಿಸಿಲೆ ರಸ್ತೆಯನ್ನೂ ಪರಿಶೀಲಿಸಲಾಯಿತು. ಈ ಸಂದರ್ಭ ಪುತ್ತೂರು ಉಪವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು, ಹಾಸನದ ವಿಶೇಷ ಭೂಸ್ವಾಧೀನಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts