ಭೋಪಾಲ್: ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು ಮಕ್ಕಳು ಹಲವು ಬಾರಿ ಸಾಬೀತು ಮಾಡಿ ತೋರಿಸಿದ್ದಾರೆ. ಅವರಷ್ಟೇ ಏಕೆ ಹಲವು ದಿಗ್ಗಜು ಕೂಡ ಇದಕ್ಕೆ ನಿದರ್ಶನವಾಗಿ ನಮ್ಮ ಕಣ್ಣೆದುರೇ ಇದ್ದಾರೆ. ಇಂಥವರ ಸಾಲಿಗೆ ಸೇರುತ್ತಾಳೆ ಈ ಬಾಲೆ.
ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಕುಗ್ರಾಮ ಅಜ್ನೋಲ್ ನಿವಾಸಿ ರೋಷ್ನಿ ಬಹಾದೌರಿಯಾ (15) ಇಂಥ ಸಾಧನೆ ಮಾಡಿದಾಕೆ. ಈಕೆ ತನ್ನ ಕುಗ್ರಾಮದಿಂದ 12 ಕಿ.ಮೀ. ದೂರದ ಮಹೆಗಾಂವ್ ಪಟ್ಟಣದಲ್ಲಿರುವ ಶಾಲೆಗೆ ದಿನವೂ ಸೈಕಲ್ನಲ್ಲಿ ಹೋಗಿ ಮನೆಗೆ ಮರಳುತ್ತಿದ್ದಳು. ಬಿಸಿಲು ಮಳೆಯೆನ್ನದೆ ಆಕೆ ಸೈಕಲ್ ತುಳಿಯುತ್ತಿದ್ದಳು. ಭಾರಿ ಮಳೆಯಾಗಿ ಕೃತಕ ನೆರೆಯಂಥ ಪರಿಸ್ಥಿತಿ ಉಂಟಾದಾಗ ಈಕೆ ತನ್ನ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದಳು.
ಇಷ್ಟೆಲ್ಲ ಕಷ್ಟಕೋಟಲೆಗಳ ನಡುವೆಯೂ ರೋಷ್ನಿ ಓದಿನ ಕಡೆ ಹೆಚ್ಚಿನ ಗಮನಕೊಡುವುದನ್ನು ಮರೆಯಲಿಲ್ಲ. ಶಾಲೆಯಲ್ಲಿ ಪಾಠವನ್ನು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದ ಆಕೆ, ಮನೆಗೆ ಮರಳಿದ ಬಳಿಕ ಪುನರ್ಮನನ ಮಾಡುತ್ತಿದ್ದಳು. ಹೀಗಾಗಿ ಈಕೆ ಮಧ್ಯಪ್ರದೇಶದ 10ನೇ ತರಗತಿ ಪರೀಕ್ಷೆಯಲ್ಲಿ ಶೇ.98.5 ಅಂಕಗಳನ್ನು ಗಳಿಸಿ, ಗರಿಷ್ಠ ಅಂಕ ಸಾಧನೆ ಮಾಡಿದವರ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದುಕೊಂಡಿದ್ದಾಳೆ.
ಇದನ್ನೂ ಓದಿ: ಬೇಕಿತ್ತಾ ಚೀನಾ ಇದೆಲ್ಲಾ? ಹೀರೋ ಸೈಕಲ್ನಿಂದ ಭಾರಿ ಗುದ್ದು- ಎಂ.ಡಿ.ಹೇಳಿದ್ದೇನು?
ಈಕೆ ಗಣಿತ ಮತ್ತು ವಿಜ್ಞಾನದ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾಳೆ. ತಮ್ಮ ಪುತ್ರಿಯ ಈ ಸಾಧನೆ ಕಂಡು ಆಕೆಯ ಕೃಷಿಕ ತಂದೆ ಪುರುಷೋತ್ತಮ ಬದೌರಿಯಾ ಅವರ ಸಂತಸ ಮೇರೆ ಮೀರಿದೆ. ನನ್ನ ಮಕ್ಕಳೆಲ್ಲರೂ ಓದಿನಲ್ಲಿ ಮುಂದಿದ್ದಾರೆ. ಆದರೆ ರೋಶ್ನಿ ಮಾತ್ರ ಅವರೆಲ್ಲರಿಗಿಂತ ಎತ್ತರದ ಸಾಧನೆ ಮೆರೆದಿದ್ದಾಳೆ ಎಂದು ಹೇಳಿದ್ದಾರೆ.
ಕಲೆಕ್ಟರ್ ಆಗುತ್ತೇನೆ: ಓದು ಮುಂದುವರಿಸಿ, ಐಎಎಸ್ ಅಧಿಕಾರಿಯಾಗುವ ಆಸೆ ತನ್ನದು ಎಂದು ರೋಷ್ನಿ ಹೇಳಿದ್ದಾಳೆ. ಕಲೆಕ್ಟರ್ ಆದರೆ ಸಮಾಜಕ್ಕೆ ಸಾಕಷ್ಟು ಒಳ್ಳೆಯ ಕೆಲಸ ಮಾಡಬಹುದು ಎಂಬುದನ್ನು ಕೇಳಿತಿಳಿದುಕೊಂಡಿದ್ದೇನೆ. ಆದ್ದರಿಂದ, ನಾನು ಕಲೆಕ್ಟರ್ ಆಗಬೇಕು ಎಂದು ನಿರ್ಧರಿಸಿದ್ದೇನೆ ಎಂದು ಆಕೆ ಹೇಳಿದ್ದಾಳೆ.