ರಾಯಚೂರು: ರಾಕ್ಯ ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷೆ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಯಾದ ದಿನದಿಂದಲ್ಲೂ ಒಂದಿಲ್ಲೊಂದು ವಿಚಾರಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ. ಶಕ್ತಿ ಮಹಿಳೆಯರಿಗೆ ಅನುಕೂಲ ಆಗುವುದರ ಜೊತೆಗೆ ಸಾಕಷ್ಟು ಅವಾಂತರಗಳಗಳಾಗಿವೆ. ಮಹಿಳೆಯರು ಸೀಟಿಗಾಗಿ ಹಾಗೂ ಕಂಡಕ್ಟರ್ಗಳ ಜೊತೆ ಜಗಳವಾಡಿರುವುದನ್ನು ನೋಡಿದ್ದೇವೆ. ಇದೀಗ ಶಕ್ತಿ ಯೋಜನೆಯಿಂದಾಗಿ ಮತ್ತೊಂದು ಅವಾಂತರ ನಡೆದಿದ್ದು, ಈ ಯೋಜನೆ ದುರುಪಯೋಗವಾಗುತ್ತಿದೆಯಾ ಎಂಬ ಸಂಶಯ ಮೂಡಲು ಶುರುವಾಗಿದೆ.
ಮಹಿಳೆಯರಿಗಾಗಿ ನೀಡಲಾಗಿರುವ ಫ್ರೀ ಬಸ್ ಸೇವೆ ಮಕ್ಕಳ ಮೇಲೂ ಪರಿಣಾಮ ಬೀರುತ್ತಿದೆ. ಪೋಷಕರು ಜಾತ್ರೆಗೆ ಕರೆದೊಯ್ಯಲಿಲ್ಲ ಎಂಬ ಕಾರಣಕ್ಕೆ ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳು ಆಧಾರ್ ಕಾರ್ಡ್ ಸಮೇತ ಊರು ತೊರೆದಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಯರಗುಂಟಿ ಗ್ರಾಮದಲ್ಲಿ ನಡೆದಿದೆ.
ಪ್ರಕರಣದ ಹಿನ್ನಲೆ
ನಾಲ್ಕು ಜನ ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳು ಯಾದಗಿರಿಯ ತಿಂಥಿಣಿಯ ಮೌನೇಶ್ವರ ಜಾತ್ರೆಗೆ ಕರೆದೊಯ್ಯುವಂತೆ ಪೋಷಕರಿಗೆ ಕೇಳಿದ್ದಾರೆ. ಇದಕ್ಕೆ ಒಪ್ಪದ ಪೋಷಕರು ಮಕ್ಕಳಿಗೆ ಮನೆಯಲ್ಲೇ ಇರುವಂತೆ ಸೂಚಿಸಿದ್ದಾರೆ. ಈ ಮಧ್ಯೆ ನಾಲ್ವರು ಬಾಲಕಿಯರು ಜಾತ್ರೆಗೆ ಹೋಗೋದಕ್ಕೆ ಪ್ಲಾನ್ ಮಾಡಿಕೊಂಡಿದ್ದಾರೆ. ಅದರಂತೆ ತಮ್ಮ ಶಾಲೆಯಲ್ಲಿ ಕ್ರೀಡಾಕೂಟ ಇದೆ. ಪಟ್ಟಣಕ್ಕೆ ಹೋಗ್ಬೇಕು ಎಂದು ಮನೆಯಲ್ಲಿ ಸುಳ್ಳು ಹೇಳಿ ಆಧಾರ್ ಕಾರ್ಡ್ ಹಾಗೂ ಬಟ್ಟೆ ತೆಗೆದುಕೊಂಡು ಯಾದಗಿರಿಯ ತಿಂಥಿಣಿಯ ಮೌನೇಶ್ವರ ಜಾತ್ರೆಗೆ ತೆರಳಿದ್ದಾರೆ.
ಇದನ್ನೂ ಓದಿ: ದರ್ಶನ್ vs ಉಮಾಪತಿ; ಈ ಸಂದರ್ಭದಲ್ಲಿ ಇಂತಹ ಬೆಳವಣಿಗೆ ಬೇಕಾಗಿರಲಿಲ್ಲ: ಇಂದ್ರಜಿತ್ ಲಂಕೇಶ್
ರಾತ್ರಿಯಾದರೂ ಮನೆಗೆ ಬಾರದ್ದು ಕಂಡು ಪೋಷಕರು ಆತಂಕಕ್ಕೊಳಗಾಗಿ ಪೊಲೀಸರಿಗೆ ದೂರು ನೀಡಿದ್ದರು. ಮಕ್ಕಳ ನಾಪತ್ತೆ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಲಿಂಗಸೂಗೂರು ಪೊಲೀಸರು ಅಪ್ರಾಪ್ತ ವಯಸ್ಕ ಬಾಲಕಿಯರ ಪತ್ತೆಗೆ ವಿಶೇಷ ತಂಡ ರಚಿಸಿ ಹುಡುಕಾಟ ನಡೆಸಿದ್ದರು. ನಾಪತ್ತೆಯಾದ ಮಕ್ಕಳಿಗಾಗಿ ಲಿಂಗಸೂಗೂರು ಸುತ್ತಮುತ್ತ ಹಳ್ಳಿಗಳಲ್ಲಿ ಹುಡುಕಾಟ ನಡೆಸಿದ್ದ ಪೊಲೀಸರು. ಒಂದು ತಂಡ ತಿಂಥಿಣಿ ಮೌನೇಶ್ವರ ಜಾತ್ರೆಯಲ್ಲೂ ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದರು.
ತಿಂಥಿಣಿ ಜಾತ್ರೆಯಲ್ಲಿ ಪ್ರಸಾದ ಸ್ವೀಕರಿಸಿ ತಿರುಗಾಡಿದ್ದ ಬಾಲಕಿಯರು ದೇವಸ್ಥಾನದ ಬಳಿ ವಿಶ್ರಾಂತಿಗೆ ಕುಳಿತಿದ್ದಾಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಬಾಲಕಿಯರ ಕೈಯಲ್ಲಿ ಆಧಾರ್ ಕಾರ್ಡ್ ಇರುವುದು ಪತ್ತೆಯಾಗಿದೆ. ತಿಂಥಿಣಿ ಮೌನೇಶ್ವರ ಜಾತ್ರೆಗೆ ಬಂದಿರುವುದಾಗಿ ಪೊಲೀಸರಿಗೆ ತಿಳಿಸಿರುವ ಬಾಲಕಿಯರನ್ನು ಪೊಲೀಸ್ ಠಾಣೆಗೆ ಕರೆತಂದ ಅಧಿಕಾರಿಗಳು ನಾಲ್ವರನ್ನು ಪೋಷಕರಿಗೆ ಒಪ್ಪಿಸಿದ್ದಾರೆ.
ಒಟ್ಟಿನಲ್ಲಿ ಫ್ರೀ ಪ್ರಯಾಣದಿಂದ ಮಕ್ಕಳಿಗೆ ಚಿನ್ನಾಟ ಹೆತ್ತವರಿಗೆ ಪ್ರಾಣಸಂಕಟ ಎಂಬಂತಾಗಿ ಕೊನೆಗೆ ಸುರಕ್ಷಿತವಾಗಿ ಮನೆ ಸೇರಿರುವ ಬಾಲಕಿಯರು. ಲಿಂಗಸೂಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ. ಒಟ್ಟಿನಲ್ಲಿ ಫ್ರೀ ಪ್ರಯಾಣದಿಂದ ಮಕ್ಕಳಿಗೆ ಚಿನ್ನಾಟ ಹೆತ್ತವರಿಗೆ ಪ್ರಾಣಸಂಕಟ ಎಂಬಂತಾಗಿದೆ.