ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ನಡುವಿನ ಕಾಳಗ ಯಾಕೋ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಕಾಟೇರ ಸಿನಿಮಾದ ಟೈಟಲ್ ಹಾಗೂ ಕತೆಯಿಂದ ಶುರುವಾದ ಈ ವಿವಾದವು ಈಗ ಮತ್ತೊಂದು ಹಂತ ತಲುಪಿದ್ದು, ಇದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಇಂದ್ರಜಿತ್, ಚಿತ್ರರಂಗಕ್ಕೆ ಹಲವಾರು ದಿನಗಳ ನಂತರ ಕಾಟೇರದಂತಹ ಯಶಸ್ವಿ ಚಿತ್ರ ಸಿಕ್ಕಿದೆ. ಕಾಟೇರ ಬಗ್ಗೆ ನಾನು ಹೇಳಬೇಕಿಲ್ಲ. 50 ದಿನಗಳನ್ನು ಕಂಡಿದೆ ಜನರೇ ಯಶಸ್ವಿ ಮಾಡಿದ್ದಾರೆ. ಕಾಟೇರದಲ್ಲಿ ಕೆಲಸ ಮಾಡಿದ ತಂತ್ರಜ್ಞರೆಲ್ಲರೂ ಈ ಹಿಂದೆ ನನ್ನ ಸಿನಿಮಾದಲ್ಲೂ ಮಾಡಿದ್ದಾರೆ.
ಇದನ್ನೂ ಓದಿ: ಬಾಲಿವುಡ್ನಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ, ಸೆಲೆಬ್ರಿಟಿಗಳ ವಾಟ್ಸ್ಆ್ಯಪ್ ಹ್ಯಾಕ್ ಆಗಿದೆ: ಕಂಗನಾ ರಣಾವತ್
ದರ್ಶನ್ ಕೂಡ ನನ್ನ ಪ್ರೀತಿಯ ರಾಮು ಹಾಗೂ ಸಂಗೊಳ್ಳಿರಾಯಣ್ಣ ಬಳಿಕ ಅದ್ಭುತ ಅಭಿನಯ ನೀಡಿರುವ ಸಿನಿಮಾವಿದು. ಈಗ ಕಾಟೇರನೂ ಹಿಟ್ ಆಗಿದೆ. ಈ ಸಂದರ್ಭದಲ್ಲಿ ಇಂತಹದ್ದೊಂದು ಬೆಳವಣಿಗೆ ಬೇಕಾಗಿರಲಿಲ್ಲ. ನಿರ್ಮಾಪಕ ಉಮಾಪತಿ ಹಾಗೂ ದರ್ಶನ್ ನಡುವಿನ ಕಿತ್ತಾಟ ಚಿತ್ರರಂಗಕ್ಕೆ ಶೋಭೆ ತರುವುದಿಲ್ಲ. ಈ ಸಮಸ್ಯೆಯನ್ನು ಅವರವರೇ ಕೂತು ಬಗೆ ಹರಿಸಿಕೊಳ್ಳಬೇಕು. ಇದು ಚಿತ್ರರಂಗಕ್ಕೆ ಶೋಭೆ ತರವಂತಹದ್ದು ಅಲ್ಲ.
ಹಿಂದೆ ನಾನು ಕೆಲವು ವಿಷಯಗಳ ಬಗ್ಗೆ ಮಾತಾಡಿದ್ದೆ. ಈ ಸಂದರ್ಭದಲ್ಲಿ ನನಗೆ ಮಾತಾಡುವುದಕ್ಕೆ ಇಷ್ಟವಿಲ್ಲ. ಯಾಕಂದ್ರೆ, ನೀವು ನೋಡಿದ್ದೀರ, ಕೆಟ್ಟ ಬೆಳವಣಿಗೆ ಆಗುತ್ತೆ. ಇವತ್ತು ನಾನು ಕಮೆಂಟ್ ಮಾಡುತ್ತೇನೆ. ಮುಂದೆ ಯಾರೋ ಕಮೆಂಟ್ ಮಾಡುತ್ತಾರೆ. ಅದೊಂತರ ಬೆಳೆದು ಹೋಗುತ್ತೆ. ಚಿತ್ರರಂಗದ ದೃಷ್ಟಿಯಲ್ಲಿ ಕೂತು ಬಗೆಹರಿಸಿಕೊಳ್ಳಬೇಕು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅಭಿಪ್ರಾಯಪಟ್ಟಿದ್ದಾರೆ.