| ಮಂಜು ಕೊಟಗುಣಸಿ ಬೆಂಗಳೂರು
ಕಾಮನ್ ಮ್ಯಾನ್ ಎಂದು ಹೇಳಿಕೊಂಡು ಕಥಾನಾಯಕ ವಿಜಯ್ (ವಿನೋದ್ ಪ್ರಭಾಕರ್) ನೇರವಾಗಿ ಪೊಲೀಸ್ ಸ್ಟೇಷನ್ಗೆ ಬಂದು ‘ನನ್ನ ನೆರಳೇ ಕಾಣುತ್ತಿಲ್ಲ …’ ಎಂದು ಹೇಳಿಕೊಳ್ಳುತ್ತಾನೆ. ಇತ್ತ ಒಳ್ಳೇ ಕೇಸ್ಗಾಗಿ ಕಾಯುತ್ತಿದ್ದ ಪೊಲೀಸಪ್ಪ, ಆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾನೆ. ಮಾಧ್ಯಮಗಳಲ್ಲಿಯೂ ಅದು ದೊಡ್ಡ ಸಂಚಲನವನ್ನೇ ಸೃಷ್ಟಿಮಾಡುತ್ತದೆ. ಕಥೆ ಮತ್ತೊಂದು ಮಗ್ಗುಲಿಗೆ ಹೊರಳುತ್ತದೆ. ಅಲ್ಲಿಂದ ಕಾಣದ ನೆರಳಿನ ಜತೆಗೆ ಆತ್ಮದ ಆಟವು ಶುರುವಾಗುತ್ತದೆ!
ಇಲ್ಲಿಯವರೆಗೂ ನಟ ವಿನೋದ್ ಪ್ರಭಾಕರ್ ಅವರನ್ನು ತೆರೆಮೇಲೆ ನೋಡಿದವರಿಗೆ ‘ಶ್ಯಾಡೊ’ ಚಿತ್ರ ವಿಭಿನ್ನ ಅನುಭವ ನೀಡುತ್ತದೆ. ಮಾಸ್ ಪ್ರೇಕ್ಷಕರಿಗೆ ಬೇಕಾದ ಭರ್ಜರಿ ಫೈಟಿಂಗ್ ಮತ್ತು ಡೈಲಾಗ್ಸ್ ಜತೆಗೆ ಒಂದು ಹೊಸದಾದ ಪ್ರಯತ್ನ ವಿನೋದ್ ಅವರಿಂದ ಆಗಿದೆ. ಆ ಪ್ರಯತ್ನ ಎಂಥದ್ದು ಎಂಬುದು ಚಿತ್ರದ ಮಧ್ಯಂತರದಷ್ಟೊತ್ತಿಗೆ ಗೊತ್ತಾಗುತ್ತದೆ.
ಆರಂಭದಲ್ಲಿಯೇ ಚಿತ್ರದ ಕಥೆಯ ಪ್ಲಾಟ್ ತೆರೆದುಕೊಳ್ಳುವುದರಿಂದ, ಮುಂದೆನಾಗುತ್ತದೆ ಎಂಬ ಸಹಜ ಕುತೂಹಲವನ್ನು ಸಿನಿಮಾದುದ್ದಕ್ಕೂ ನಿರ್ದೇಶಕ ರವಿಗೌಡ ಕಾಯ್ದುಕೊಂಡು ಹೋಗಿದ್ದಾರೆ. ಸಸ್ಪೆನ್ಸ್ ಅಂಶವೂ ಕಥೆಗೆ ಅಂಟಿಕೊಂಡಿರುವುದರಿಂದ ರೋಚಕತೆಯೂ ನೆಲೆಯೂರಿದೆ. ಇದೆಲ್ಲ ಒಂದು ಬದಿಗಿಟ್ಟರೆ, ಚಿತ್ರದಲ್ಲಿ ನಾಯಕ-ನಾಯಕಿಯ ಪ್ರೇಮ ಚಿಗುರುವ ಪರಿ ತುಂಬ ಕ್ಲೀಷೆ ಎನಿಸುವಂತಿದೆ. ಥಟ್ ಅಂತ ಹುಟ್ಟುವ ಪ್ರೇಮದ ಗಾಢತೆ ಎಲ್ಲಿಯೂ ಕಾಣಿಸುವುದಿಲ್ಲ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾದಲ್ಲಿ ಹಿನ್ನೆಲೆ ಸಂಗೀತವೂ ಅಷ್ಟೇ ಮಹತ್ವದ ಪಾತ್ರ ವಹಿಸುತ್ತದೆ. ಆ ವಿಭಾಗದಿಂದಲೂ ಮತ್ತಷ್ಟು ಕೌತುಕವನ್ನು ತುಂಬುವ ಕೆಲಸವಾಗಬೇಕಿತ್ತು. ಹಾಡುಗಳಿದ್ದರೂ ಅವ್ಯಾವೂ ಗುನುಗುವ ಗುಣಹೊಂದಿಲ್ಲ.
ಎರಡು ಶೇಡ್ಗಳಲ್ಲಿ ನಟ ವಿನೋದ್ ಅವರ ಮಾಸ್ ಅಪಿಯರನ್ಸ್ ಸಿನಿಮಾದಲ್ಲಿ ಕಾಣಿಸುತ್ತದೆ. ಅವರ ಎಣ್ಣೆ ಸವರಿದ, ಹುರಿಗಟ್ಟಿದ ದೇಹ ತೆರಮೇಲೂ ಹೊಳೆಯುತ್ತದೆ. ಚಿತ್ರದಲ್ಲಿನ ಆಕ್ಷನ್ ಸನ್ನಿವೇಶಗಳಿಗೆ ಪೂರ್ಣಾಂಕ ಸಲ್ಲಬೇಕು. ಶರತ್ ಲೋಹಿತಾಶ್ವ ಖಡಕ್ ಪೊಲೀಸ್ ಅಧಿಕಾರಿ ಯಾಗುವುದರ ಜತೆಗೆ ನಗು ಉಕ್ಕಿಸುವ ಕೆಲಸವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಖಳನಟನಾಗಿ ಟಾಲಿವುಡ್ ನಟ ಶ್ರವಣ್ ಅವರನ್ನು ಕರೆಸಿದ್ದರಾದರೂ, ಅವರ ಪಾತ್ರದ ತೂಕ ಹೆಚ್ಚಿಸಬಹುದಾದ ಸಾಧ್ಯತೆಗಳನ್ನು ನಿರ್ದೇಶಕರು ಅನಾಮತ್ತಾಗಿ ಕೈಚೆಲ್ಲಿದ್ದಾರೆ.
ಚಿತ್ರ: ಶ್ಯಾಡೊ
ನಿರ್ಮಾಣ: ಶ್ರೀ ಕನಕದುರ್ಗಾ ಚಲನಚಿತ್ರ
ನಿರ್ದೇಶನ: ರವಿ ಗೌಡ
ತಾರಾಗಣ: ವಿನೋದ್ ಪ್ರಭಾಕರ್, ಶೋಭಿತಾ ರಾಣಾ, ಶರತ್ ಲೋಹಿತಾಶ್ವ, ಗಿರಿ, ಶ್ರವಣ್
ಮನೆಗೆ ಬಂದ ಮಹಾಲಕ್ಷ್ಮೀ… ಕಳೆದ 30 ವರ್ಷ ಎಲ್ಲಿದ್ದರು? ನಟಿ ಬಾಯ್ಬಿಟ್ಟ ಎಕ್ಸ್ಕ್ಲೂಸಿವ್ ಮಾಹಿತಿ ಇಲ್ಲಿದೆ