ಬಳ್ಳಾರಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 40 ಸಾವಿರ ರೂ. ದಂಡ ವಿಧಿಸಿರುವ ನಗರದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಿ.ವಿನಯ್ ಅವರು, ಸರ್ಕಾರ ಸಂತ್ರಸ್ತೆಗೆ 7 ಲಕ್ಷ ರೂ. ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಬೇಕೆಂದು ಗುರುವಾರ ಆದೇಶಿಸಿದ್ದಾರೆ.
ಮಲ್ಲಯ್ಯ ಶಿಕ್ಷೆಗೆ ಒಳಪಟ್ಟವ.ಬಾಲಕಿ ಆಟವಾಡುತ್ತಿದ್ದ ವೇಳೆ ಚಾಕೋಲೆಟ್ ಕೊಡುವುದಾಗಿ ಕರೆದೊಯ್ದು ಅತ್ಯಾಚಾರವೆಸಗಿ, ಜೀವ ಬೆದರಿಕೆಯೊಡ್ಡಿದ್ದ ಮಲ್ಲಯ್ಯ ವಿರುದ್ಧ ಸಿರಗುಪ್ಪ ಠಾಣೆಯಲ್ಲಿ 2021ರ ಸೆ.16 ರಂದು ಪೋಕ್ಸೊ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ಕೈಗೆತ್ತಿಕೊಂಡ ಅಪರ ಜಿಲ್ಲಾ ಮತ್ತು ನ್ಯಾಯಾಲಯದ ನ್ಯಾಯಾಧೀಶರು, 20 ವರ್ಷ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಸಂತ್ರಸ್ಥೆಗೆ ಪರಿಹಾರವಾಗಿ 7ಲಕ್ಷ ರೂ. ಪರಿಹಾರ, ಜೀವನಾಧಾರಕ್ಕೆ ಪುರ್ನವಸತಿ ಯನ್ನು ರಾಜ್ಯ ಸರ್ಕಾರ ಕಲ್ಪಿಸಬೇಕು. ಅಪರಾಧಿಯಿಂದ ವಸೂಲಾದ ದಂಡದ ಹಣದಲ್ಲಿ ಬಾಲಕಿಗೆ 10 ಸಾವಿರ ರೂ. ಹಾಗೂ ಪಾಲಕರಿಗೆ 30 ಸಾವಿರ ಮೀಸಲಿಡಬೇಕು. ಸಂತ್ರಸ್ತೆ 16ವರ್ಷ ಪೂರೈಸಿದ ಬಳಿಕ ವೃತ್ತಿಪರ ಜೀವನಕ್ಕೆ ಬಾಲ ನ್ಯಾಯಾಲಯ ಮಂಡಳಿ ಮಧ್ಯಸ್ಥಿಕೆ ವಹಿಸಿ ಮಕ್ಕಳ ಸಂಸ್ಥೆ, ವೃದ್ಧಾಶ್ರಮ, ಬುದ್ಧಿಮಾಂದ್ಯ ಆಶ್ರಯದಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಉದ್ಯೊಗ ಅವಕಾಶ ಒದಗಿಸಿಕೊಡಬೇಕೆಂದು ಜಿಲ್ಲಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಎಂ.ಪ್ರಭಾವತಿ ಅವರು ವಾದ ಮಂಡಿಸಿದ್ದರು.