ಜೈಪುರ: ಅಂಗನವಾಡಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 20ಕ್ಕೂ ಹಚ್ಚು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ಸಂಬಂಧ ಸಿರೋಹಿ ಮುನ್ಸಿಪಲ್ ಕೌನ್ಸಿಲ್ನ ಅಧ್ಯಕ್ಷ ಮಹೇಂದ್ರ ಮೇವಾಡ ಮತ್ತು ಮಾಜಿ ಪುರಸಭೆಯ ಆಯುಕ್ತ ಮಹೇಂದ್ರ ಚೌಧರಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಪಾಲಿ ಜಿಲ್ಲೆಯ ಮಹಿಳೆಯೊಬ್ಬರು ಪೊಲೀಸರನ್ನು ಸಂಪರ್ಕಿಸಿದ ಬಳಿಕ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿಗಳು ತಮಗೆ ಹಾಗೂ ಇತರೆ ಸುಮಾರು 20 ಮಹಿಳೆಯರಿಗೆ ಕೆಲಸದ ಆಮಿಷ ಒಡ್ಡಿದ್ದರು ಎಂದು ಸಂತ್ರಸ್ತೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಶಕ್ತಿ ಯೋಜನೆಗೆ ಒಲಿದು ಬಂತು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ
ಕೆಲಸದ ಆಮಿಷವೊಡ್ಡಿ ಸಂತ್ರಸ್ತೆರನ್ನು ಸಂಪರ್ಕಿಸಿದ ಆರೋಪಿಗಳು ಊಟ ಹಾಗೂ ವಸತಿಯನ್ನು ಒದಗಿಸುತ್ತಿದ್ದರು. ತಾವು ಸೇವಿಸುವ ಆಹಾರದಲ್ಲಿ ಮತ್ತು ಬರುವ ಪದಾರ್ಥಗಳನ್ನು ಬೆರೆಸಲಾಗಿತ್ತು. ಆಹಾರ ಸೇವಿಸಿದ ಬಳಿಕ ತಮ್ಮ ಮೇಲೆ ಸುಮಾರು 8- 10 ಮಂದಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ತಮಗೆ ಪ್ರಜ್ಞೆ ಮರಳಿದಾಗ ಈ ಬಗ್ಗೆ ಪ್ರಶ್ನಿಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಬೇಡಿಕೆಗೆ ಅನುಗುಣವಾಗಿ ತಮ್ಮೊಂದಿಗೆ ದೈಹಿಕ ಸಂಬಂಧದಲ್ಲಿ ತೊಡಗುವಂತೆ ಅತ್ಯಾಚಾರ ಎಸಗಿದ್ಧಾರೆ ಎಂದು ಮಹಿಳೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಮಹಿಳೆಯರು ಈ ಹಿಂದೆ ಸುಳ್ಳು ದೂರು ನೀಡಿದ್ದರು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಪರಾಸ್ ಚೌಧರಿ ಪ್ರತಿಪಾದಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಕೆಲವು ಪ್ರಕರಣಗಳು ದಾಖಲಾಗಿದ್ದವು. ಆದರೆ ತನಿಖೆ ಸಂದರ್ಭದಲ್ಲಿ ಸಂತ್ರಸ್ತ ಮಹಿಳೆಯರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರು ನೀಡಿದ್ದ ಸಂಪರ್ಕ ವಿವರಗಳು ತಪ್ಪಾಗಿರುವುದು ಕಂಡುಬಂದಿತ್ತು. ಈ ಕಾರಣದಿಂದ ಅವುಗಳನ್ನು ಸುಳ್ಳು ಪ್ರಕರಣಗಳು ಎಂದು ಗುರುತಿಸಲಾಗಿತ್ತು. ಆದರೆ, ಎಂಟು ಮಂದಿ ಮಹಿಳೆಯರು ಅರ್ಜಿ ಸಲ್ಲಿಸಿದ ಬಳಿಕ ಪ್ರಕರಣ ದಾಖಲು ಮಾಡುವಂತೆ ರಾಜಸ್ಥಾನ ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ತನಿಖೆ ಚುರುಕುಗೊಳಿಸಿರುವ ಪೊಲೀಸರು ಎಂಟು ಮಹಿಳೆಯರ ದೂರಿನ ಆಧಾರದಲ್ಲಿ ಸಿರೋಹಿ ನಗರ ಪಾಲಿಕೆ ಅಧ್ಯಕ್ಷ ಮಹೇಂದ್ರ ಮೇವಾಡ ಮತ್ತು ಮಾಜಿ ಪಾಲಿಕೆ ಆಯುಕ್ತ ಮಹೇಂದ್ರ ಚೌಧರಿ ವಿರುದ್ಧ ಎಂಟು ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಎಲ್ಲಾ ಎಫ್ಐಆರ್ಗಳಲ್ಲಿಯೂ ಒಂದೇ ರೀತಿಯ ಆರೋಪಗಳಿವೆ.