More

    ರಾಜಸ್ಥಾನ ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ: ಕಾಂಗ್ರೆಸ್​ ಅಭ್ಯರ್ಥಿ ರೂಪಿಂದರ್​ಗೆ ಜಯ

    ಜೈಪುರ: ರಾಜಸ್ಥಾನದ ಕರಣ್‌ಪುರ ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ರೂಪಿಂದರ್ ಸಿಂಗ್ ಕೂನರ್ ಅವರು ಸೋಮವಾರ ಬಿಜೆಪಿಯ ಸುರೇಂದರ್‌ಪಾಲ್ ಸಿಂಗ್ ಅವರನ್ನು ಸೋಲಿಸಿದ್ದಾರೆ. ಕಾಂಗ್ರೆಸ್‌ನ ರೂಪಿಂದರ್ ಸಿಂಗ್ 94,950 ಮತಗಳನ್ನು ಪಡೆದು 11,284 ಅಂತರದಿಂದ ಜಯ ಗಳಿಸಿದ್ದಾರೆ.

    ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಭ್ಯರ್ಥಿ ರೂಪಿಂದರ್ ಸಿಂಗ್ ಕೂನರ್ ಅವರನ್ನು ಕರಣ್‌ಪುರ ಉಪಚುನಾವಣೆಯಲ್ಲಿ ವಿಜಯಶಾಲಿಯಾಗಿರುವುದಕ್ಕೆ ಅಭಿನಂದಿಸಿದ್ದಾರೆ.

    ಈ ಕುರಿತು ಸೋಮವಾರ ಹೇಳಿಕೆ ನೀಡಿರುವ ಗೆಹ್ಲೋಟ್, ”ಕರಣಪುರದ ಜನತೆ ಬಿಜೆಪಿಯ ಅಹಂಕಾರವನ್ನು ಸೋಲಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ತನ್ನ ಅಭ್ಯರ್ಥಿಯನ್ನು ಮಂತ್ರಿ ಮಾಡುವ ಮೂಲಕ ನೀತಿ ಸಂಹಿತೆ ಮತ್ತು ನೈತಿಕತೆಯನ್ನು ಉಲ್ಲಂಘಿಸಿದ ಬಿಜೆಪಿಗೆ ಸಾರ್ವಜನಿಕರು ತಕ್ಕ ಪಾಠ ಕಲಿಸಿದ್ದಾರೆ ” ಎಂದಿದ್ದಾರೆ.

    ಕರಣ್‌ಪುರ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿದ್ದರೂ, ಡಿಸೆಂಬರ್ 30 ರಂದು ಭಜನ್‌ಲಾಲ್ ಸರ್ಕಾರದ ಇತ್ತೀಚಿನ ವಿಸ್ತರಣೆಯಲ್ಲಿ ಸುರೇಂದರ್‌ಪಾಲ್ ಸಿಂಗ್ ಅವರನ್ನು ಸಚಿವರನ್ನಾಗಿ ನೇಮಿಸಲಾಗಿತ್ತು.

    ವಿಧಾನಸಭೆ ಉಪಚುನಾವಣೆಯ ಅಭ್ಯರ್ಥಿಯಾಗಿರುವಾಗಲೇ ಸಿಂಗ್ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರಿಂದ ನೀತಿ ಸಂಹಿತೆಯ ಉಲ್ಲಂಘನೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಆಕ್ಷೇಪಣೆ ಎತ್ತಿತ್ತು.

    ರಾಜಸ್ಥಾನದಲ್ಲಿ ನವೆಂಬರ್ 25 ರಂದು 200 ವಿಧಾನಸಭೆ ಸ್ಥಾನಗಳ ಪೈಕಿ 199 ಸ್ಥಾನಗಳಿಗೆ ಮತದಾನ ನಡೆದಿತ್ತು, ಕಾಂಗ್ರೆಸ್ ಅಭ್ಯರ್ಥಿ ಗುರ್ಮೀತ್ ಸಿಂಗ್ ಕೂನರ್ ಅವರ ಅಕಾಲಿಕ ನಿಧನದಿಂದಾಗಿ ಕರಣ್‌ಪುರ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿತ್ತು.

    ರಾಜ್ಯ ವಿಧಾನಸಭೆ ಚುನಾವಣೆಗೆ ಹತ್ತು ದಿನಗಳ ಮೊದಲು ಗುರ್ಮೀತ್ ಅವರು ನಿಧನರಾಗಿದ್ದು, ಅನುಕಂಪದ ಮತಗಳನ್ನು ಗಳಿಸುವ ಉದ್ದೇಶದೊಂದಿಗೆ ಉಪಚುನಾವಣೆಯಲ್ಲಿ ಅವರ ಮಗ ರೂಪಿಂದರ್ ಸಿಂಗ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದ್ದು ಈಗ ಫಲ ನೀಡಿದೆ.
    ಈಚೆಗೆ ಜರುಗಿದ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 199 ರ ಪೈಕಿ 115 ಸ್ಥಾನಗಳನ್ನು ಪಡೆಯುವ ಮೂಲಕ ವಿಜಯಶಾಲಿಯಾಗಿದ್ದು, ಕಾಂಗ್ರೆಸ್ 69 ಸ್ಥಾನಗಳನ್ನು ಪಡೆದುಕೊಂಡಿದೆ.

    2023ರಲ್ಲಿ ಉತ್ತಮ ಗಳಿಕೆ ಮಾಡಿದ ಮಿಡ್-ಕ್ಯಾಪ್ ಫಂಡ್​ ಹೂಡಿಕೆ: 2024ರಲ್ಲಿಯೂ ಸಿಗುವುದೇ ಲಾಭ?

    ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ: 670.93 ಅಂಕ ಕುಸಿದ ಬಿಎಸ್​ಇ ಸೂಚ್ಯಂಕ

    ಮಾಲ್ಡೀವ್ಸ್‌ ಜತೆ ವಹಿವಾಟು ಮಾಡದಂತೆ ರಫ್ತುದಾರರಿಗೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಒತ್ತಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts