ಪುಣೆ: ಕರೊನಾ ಲಸಿಕೆ “ಕೋವಿಶೀಲ್ಡ್” ಟ್ರಯಲ್ನಲ್ಲಿ ಪಾಲ್ಗೊಂಡು ಲಸಿಕೆ ಪಡೆದ ಬಳಿಕ ನರವೈಜ್ಞಾನಿಕ ಮತ್ತು ಮಾನಸಿಕ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ಆರೋಪಿಸಿರುವ ಚೆನ್ನೈ ಮೂಲದ ಸ್ವಯಂಸೇವಕನ ವಿರುದ್ಧ ಪುಣೆ ಮೂಲದ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) 100 ಕೋಟಿ ರೂ. ಮಾನಹಾನಿ ಪ್ರಕರಣವನ್ನು ದಾಖಲಿಸಿದೆ.
ಕೋವಿಶೀಲ್ಡ್ ಲಸಿಕೆ ಪ್ರಯೋದಲ್ಲಿ ಭಾಗವಹಿಸಿದ 40 ವರ್ಷದ ಸ್ವಯಂಸೇವಕ ಎಸ್ಐಐನಿಂದ 5 ಕೋಟಿ ರೂ. ಪರಿಹಾರ ಕೇಳಿದ್ದಾರೆ. ಲಸಿಕೆಯಿಂದ ವಾಸ್ತವ ನರವೈಜ್ಞಾನಿಕ ಸ್ಥಗಿತ ಮತ್ತು ಅರಿವಿನ ಕಾರ್ಯಗಳ ದುರ್ಬಲತೆಯ ಅಡ್ಡಪರಿಣಾಮ ಬೀರಿದೆ ಎಂದು ಆರೋಪಿಸಿದ್ದಾನೆ.
ಇದನ್ನೂ ಓದಿ: ಕಾರಿಗೆ ಗುದ್ದಿದ ಟ್ರ್ಯಾಕ್ಟರ್: ದೇವಿ ದರ್ಶನ ಪಡೆದು ಹೊರಟಿದ್ದ ನವ ದಂಪತಿ ಕೂದಲೆಳೆ ಅಂತರದಲ್ಲಿ ಪಾರು
ಕೋವಿಶೀಲ್ಡ್ ಕರೊನಾ ಲಸಿಕೆಯಾಗಿದ್ದು, ಇದನ್ನು ಪುಣೆಯ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಇಂಗ್ಲೆಂಡ್ನ ಆಕ್ಸ್ಫರ್ಡ್ ಯೂನಿವರ್ಸಿಟಿ ಮತ್ತು ಅಸ್ಟ್ರಾಜೆನೆಕಾ ಕಂಪನಿಯ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಸ್ವಯಂ ಸೇವಕ ಆರೋಪವನ್ನು ತಳ್ಳಿಹಾಕಿರುವ ಸೆರಂ ಇನ್ಸ್ಟಿಟ್ಯೂಟ್, ಆತನ ವಾದ ದುರುದ್ದೇಶಪೂರಿತ ಮತ್ತು ತಪ್ಪು ಕಲ್ಪನೆಯಿಂದ ಕೂಡಿದ್ದು, ನಮಗಾಗಿರುವ ಮಾನಹಾನಿಗೆ 100 ಕೋಟಿ ರೂ. ಪರಿಹಾರ ನೀಡಬೇಕೆಂದು ಕೇಳಿದೆ. ಅಲ್ಲದೆ, ಸ್ವಯಂಸೇವಕನ ವೈದ್ಯಕೀಯ ಸ್ಥಿತಿಯ ಬಗ್ಗೆ ನಮಗೂ ಕನಿಕರವಿದೆ. ಆತನ ವೈದ್ಯಕೀಯ ಸ್ಥಿತಿಗೂ ಲಸಿಕೆ ಪ್ರಯೋಗಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಎಸ್ಐಐ ತಿಳಿಸಿದೆ.
ಸ್ವಯಂಸೇವಕನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಸೋಮವಾರ ನೋಟಿಸ್ ನೀಡುವ ಸಾಧ್ಯತೆ ಇದೆ. (ಏಜೆನ್ಸೀಸ್)