ನವದೆಹಲಿ: ಇನ್ನೂ ಮರೆಯಾಗದ ಕರೊನಾ ಆತಂಕದ ನಡುವೆ, ಹಲವು ರಾಜ್ಯಗಳಿಗೆ ಹೆಚ್ಚು ಅಪಾಯಕಾರಿಯಾದ ಸೆರೋಟೈಪ್-2 ಡೆಂಘೆ ಜ್ವರದ ಬಗ್ಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಹಲವು ರೋಗಿಗಳು ಸಾವಪ್ಪಿರುವ ಪ್ರಸಂಗಗಳೂ ಸೇರಿದಂತೆ ಈ ಪ್ರಕಾರದ ಡೆಂಘೆ ಜ್ವರ ಪ್ರಕರಣಗಳನ್ನು ದಾಖಲಿಸುತ್ತಿರುವ 11 ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ರೋಗ ಹೆಚ್ಚಳದ ತಡೆಗೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದೆ.
ಸವಾಲಾಗಿ ಬೆಳೆಯುತ್ತಿರುವ ಈ ಡೆಂಘೆ ಪ್ರಭೇದದ ಬಗ್ಗೆ ವಿವಿಧ ರಾಜ್ಯಗಳ ಅಧಿಕಾರಿಗಳೊಂದಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಶನಿವಾರ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದರು. ಸೊಳ್ಳೆ ಕಡಿತದಿಂದ ಹರಡುವ ಈ ರೋಗದ ಶೀಘ್ರ ಪತ್ತೆಗಾಗಿ ತ್ವರಿತ ಪ್ರತಿಕ್ರಿಯೆ ತಂಡಗಳನ್ನು ನೇಮಿಸುವುದು, ಫೀವರ್ ಹೆಲ್ಪ್ಲೈನ್ಗಳನ್ನು ಆರಂಭಿಸುವುದು, ಸಾಕಷ್ಟು ಟೆಸ್ಟಿಂಗ್ ಕಿಟ್ಗಳನ್ನು, ಲಾರ್ವಿಸೈಡ್ಗಳು ಮತ್ತು ಔಷಧಿಗಳನ್ನು ಶೇಖರಿಸುವುದು, ಜಾಗೃತಿ ಅಭಿಯಾನ, ವೆಕ್ಟರ್ ಕಂಟ್ರೋಲ್ ಮುಂತಾದ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.
ಕರ್ನಾಟಕಕ್ಕೂ ಕಂಟಕ: ಸೆರೋಟೈಪ್-2 ಅಥವಾ ಡೆನ್ 2 ವೈರಸ್ಗಳಿಂದ ಉಂಟಾಗುತ್ತಿರುವ ಈ ಅಪಾಯಕಾರಿ ಡೆಂಘೆ ಜ್ವರದ ಪ್ರಕರಣಗಳು ಕಂಡುಬರುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಆತಂಕ ಎದುರಿಸುತ್ತಿರುವ ಇತರ ರಾಜ್ಯಗಳೆಂದರೆ – ಆಂಧ್ರಪ್ರದೇಶ, ಗುಜರಾತ್, ಕೇರಳ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು ಮತ್ತು ತೆಲಂಗಾಣ. ಈ ರಾಜ್ಯಗಳಿಗೆ ಆಗಸ್ಟ್ ತಿಂಗಳಲ್ಲಿ ಮತ್ತು ಸೆಪ್ಟೆಂಬರ್ 10 ರಂದು ಕೂಡ ಕೇಂದ್ರ ಸರ್ಕಾರ ಸಲಹೆಸೂಚನೆಗಳನ್ನು ನೀಡಿತ್ತು ಎನ್ನಲಾಗಿದೆ. (ಏಜೆನ್ಸೀಸ್)
ಯಾರ ಮೇಲೆ ನಂಬಿಕೆ ಇದೆಯೋ ಅವರನ್ನೇ ಆಯ್ಕೆ ಮಾಡಲಿ: ರಾಜೀನಾಮೆ ನೀಡಿದ ಕ್ಯಾಪ್ಟನ್ ಉದ್ಗಾರ
ಕರ್ನಾಟಕ ಸೇರಿದಂತೆ 8 ಹೈಕೋರ್ಟ್ಗಳಿಗೆ ಹೊಸ ಮುಖ್ಯ ನ್ಯಾಯಮೂರ್ತಿಗಳ ಶಿಫಾರಸು