ಬೆಂಗಳೂರು: ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಿಲ್ಲ ಎಂದು ತೀವ್ರ ಬೇಸರಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರ ಮುಂದಿನ ನಡೆ ಏನು ಎಂಬ ನಿರ್ಧಾರವಿನ್ನೂ ಪ್ರಕಟವಾಗಿಲ್ಲ. ಈ ಕುರಿತಾಗಿ ಕರ-ಕಮಲದಲ್ಲೂ ಗಂಟೆಗಳ ಭಾರಿ ಚರ್ಚೆಯಾಗಿದ್ದರೂ ಅದು ನಿರ್ಣಾಯಕ ಹಂತವನ್ನು ತಲುಪಿಲ್ಲ. ಇಷ್ಟೆಲ್ಲ ಬೆಳವಣಿಗೆಗಳ ಬಳಿಕವೂ ಶೆಟ್ಟರ್ ನಿರ್ಧಾರ ಪ್ರಕಟಿಸಲು ಇನ್ನೊಂದು ಗಡುವು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಗೇ ಗಡುವು ಕೊಟ್ಟ ಶೆಟ್ಟರ್; ಶನಿವಾರ 11 ಗಂಟೆ ಒಳಗೆ ಪಟ್ಟಿ ಬಿಡುಗಡೆ ಮಾಡದಿದ್ದರೆ ಅಭಿಮಾನಿಗಳ ಸಭೆ ನಡೆಸಿ ತೀರ್ಮಾನ
ಇಂದು ಬೆಂಗಳೂರಿಗೆ ಆಗಮಿಸಿದ್ದ ಜಗದೀಶ ಶೆಟ್ಟರ್ ಕಾಂಗ್ರೆಸ್ನ ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಎಂ.ಬಿ.ಪಾಟೀಲ್ ಅವರ ಜತೆ ಸುದೀರ್ಘ ಮಾತುಕತೆ ನಡೆಸಿದ್ದರು. ಬಳಿಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ನ ಇತರ ಪ್ರಮುಖ ನಾಯಕರೂ ಶೆಟ್ಟರ್ ಜತೆ ಮಾತುಕತೆ ನಡೆಸಿದ್ದರು.
ಇದನ್ನೂ ಓದಿ: ಇಂದಲ್ಲ ನಾಳೆ ಮುಂದಿನ ನಿರ್ಧಾರ; ಕುತೂಹಲ ಕೆರಳಿಸಿದೆ ಶೆಟ್ಟರ್ ನಡೆ
ಇನ್ನೊಂದೆಡೆ ಬೆಂಗಳೂರಿನ ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕೂಡ ಶೆಟ್ಟರ್ ವಿಚಾರವಾಗಿ ಭಾರಿ ಚರ್ಚೆ ನಡೆದಿದೆ. ಸಭೆಯಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕೂಡ ಭಾಗಿಯಾಗಿದ್ದರು.
ಶೆಟ್ಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೆಲವು ನಿಮಿಷಗಳ ಹಿಂದೆ ಕಾಂಗ್ರೆಸ್-ಬಿಜೆಪಿ ಎರಡೂ ಕಡೆಯ ಸಭೆ ಮುಕ್ತಾಯಗೊಂಡಿದೆ. ತಮ್ಮ ನಿರ್ಧಾರವನ್ನು ನಾಳೆ ಬೆಳಗ್ಗೆ ಪ್ರಕಟಿಸುವುದಾಗಿ ಶೆಟ್ಟರ್ ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕರು ಶೆಟ್ಟರ್ಗೆ ಎಲ್ಲ ಭರವಸೆ ನೀಡಿ ಕಾಂಗ್ರೆಸ್ಗೆ ಆಹ್ವಾನಿಸಿದ್ದಾರೆ ಎನ್ನಲಾಗಿದ್ದು, ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಜತೆ ಶೆಟ್ಟರ್ ಈ ರಾತ್ರಿಯ ಭೋಜನ ಸೇವಿಸಿದ್ದಾರೆ. ಶೆಟ್ಟರ್ ಕಾಂಗ್ರೆಸ್ಗೆ ಸೇರ್ಪಡೆ ಆಗಲಿದ್ದಾರೆಯೇ ಇಲ್ಲವೇ ಎಂಬುದು ನಾಳೆ ಬೆಳಗ್ಗೆ ಖಚಿತವಾಗಲಿದೆ.
2023ರ ಅಂತಿಮ ಮತದಾರರ ಪಟ್ಟಿ: ಇಲ್ಲಿದೆ ಜಿಲ್ಲಾವಾರು, ಕ್ಷೇತ್ರವಾರು ವಿವರ