ಬೆಂಗಳೂರು: ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್ಇಪಿ) ರದ್ದುಪಡಿಸಿ ರಾಜ್ಯ ಶಿಕ್ಷಣ ನೀತಿಯಾಗಿ (ಎಸ್ಇಪಿ) ರಚನೆ ಮಾಡಲು ಸದ್ಯದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಮಂಗಳವಾರ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ಶೈಕ್ಷಣಿಕ ವರ್ಷಕ್ಕೆ (2024-25) ಹೊಸ ನೀತಿಯನ್ನು ಅನುಷ್ಠಾನ ಮಾಡಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಮಕ್ಕಳ ಮನಸ್ಸು ಕಲ್ಮಶವಾಗದ ರೀತಿಯಲ್ಲಿ ಹಾಗೂ ಶಿಕ್ಷಕರು, ಪಾಲಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಯಾವುದೇ ಪಕ್ಷದ ಸಿದ್ಧಾಂತಗಳನ್ನು ಮಕ್ಕಳ ಮೇಲೆ ಹೇರುವುದಿಲ್ಲ. ಶೈಕ್ಷಣಿಕವಾಗಿ ಮಕ್ಕಳ ಪ್ರಗತಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪರೀಕ್ಷಾ ಒತ್ತಡ ನಿವಾರಣೆಗೆ ಪಿಯು ಕಲಾ, ವಾಣಿಜ್ಯ ವಿದ್ಯಾರ್ಥಿಗಳಿಗೂ ಆಂತರಿಕ ಪರೀಕ್ಷೆ : ಸಚಿವ ಮಧು ಬಂಗಾರಪ್ಪ
ಸಮಿತಿ ರಚನೆ
ಹಿಂದಿನ ಸರ್ಕಾರವು ಮಕ್ಕಳ ಮೇಲೆ ಹೇರಿದ್ದ ಅವರ ಸಿದ್ಧಾಂತಗಳು ಹಾಗೂ ಅನಗತ್ಯ ಪಠ್ಯಗಳನ್ನು ತೆಗೆಯುವ ಕೆಲಸ ಈಗಾಗಲೇ ಮಾಡಲಾಗಿದೆ. ಮುಂದಿನ ವರ್ಷಕ್ಕೆ ಉತ್ತಮ ಪಠ್ಯಪುಸ್ತಕಗಳನ್ನು ನೀಡುವ ನಿಟ್ಟಿನಲ್ಲಿ ಹೊಸ ಪರಿಷ್ಕರಣಾ ಸಮಿತಿಯನ್ನು ಸದ್ಯದಲ್ಲಿಯೇ ನೇಮಕ ಮಾಡಲಾಗುತ್ತದೆ.
ಪಠ್ಯ ಪರಿಷ್ಕರಣೆನಾ ಅಥವಾ ಹೊಸ ರಚನೆನಾ ಎಂಬುದರ ಬಗ್ಗೆ ಹಾಗೂ ಸಮಿತಿ ಅಧ್ಯಕ್ಷರು, ಸದಸ್ಯರ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ತಿಂಗಳಲ್ಲಿ ವರ್ಗಾವಣೆ ಪೂರ್ಣ
ಜುಲೈ ಅಂತ್ಯಕ್ಕೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು. ಅದಾದ ನಂತರ ಶೂನ್ಯ ಶಿಕ್ಷಕ ಶಾಲೆಗಳು ಹಾಗೂ ಅವಶ್ಯವಿರುವ ಕಡೆ ಮೊದಲ ಆದ್ಯತೆ ನೀಡಿ ಕೊರತೆ ಇರುವ ಶಾಲೆಗಳಿಗೆ ಶಿಕ್ಷಕರನ್ನು ಭರ್ತಿ ಮಾಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.