ಚಂಡೀಗಡ: ಪ್ರತಿಭಟನಾನಿರತ ರೈತರು ಬ್ಯಾರಿಕೇಡ್ಗಳನ್ನು ದಾಟಿದಲ್ಲಿ ಅವರ ತಲೆ ಒಡೆಯಿರಿ ಎಂದು ಪೊಲೀಸರಿಗೆ ಆದೇಶ ನೀಡುತ್ತಿರುವ ಅಧಿಕಾರಿಯೊಬ್ಬರ ವಿಡಿಯೋ ಶನಿವಾರ ವೈರಲ್ ಆಗಿತ್ತು. ತಮ್ಮ ಈ ಮಾತುಗಳಿಂದಾಗಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೆ, ಇದೀಗ ಈ ಅಧಿಕಾರಿಯು ಶಿಸ್ತುಕ್ರಮ ಎದುರಿಸುವ ಪರಿಸ್ಥಿತಿ ಬಂದಿದೆ.
ಹರಿಯಾಣದ ಕರ್ನಾಲ್ ಸಬ್ಡಿವಿಷನಲ್ ಮ್ಯಾಜಿಸ್ಟ್ರೇಟ್(ಎಸ್ಡಿಎಂ) ಆಯುಷ್ ಸಿನ್ಹಾ, ಪ್ರತಿಭಟನಾಕಾರರನ್ನು ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಸೂಚನೆ ನೀಡುವ ಭರದಲ್ಲಿ, “ಯಾವ ಪ್ರತಿಭಟನಾಕಾರರೂ ಇಲ್ಲಿಗೆ ತಲುಪಬಾರದು. ಅವರು ಬ್ಯಾರಿಕೇಡನ್ನು ಉಲ್ಲಂಘಿಸಲು ಪ್ರಯತ್ನಿಸಿದರೆ ನಿಮ್ಮ ಲಾಠಿ ಎತ್ತಿ ಚೆನ್ನಾಗಿ ಬೀಸಿ. ಇಲ್ಲಿಗೆ ತಲುಪುವ ಮುಂಚೆ ಅವರ ತಲೆ ಒಡೆದಿರಬೇಕು” ಎಂದು ಹೇಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು.
ಇದನ್ನೂ ಓದಿ: ಲಾರಿಯಲ್ಲಿ ಗಿಡಗಳು ತುಂಬಿದ್ದವು… ಅವುಗಳ ಕೆಳಗಿತ್ತು ಭಾರೀ ಮೊತ್ತದ ಗಾಂಜಾ!
ಕರ್ನಾಲ್ ಕಡೆಗೆ ಸಾಗುವ ಹೆದ್ದಾರಿಯನ್ನು ಬ್ಲಾಕ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದ ರೈತಪ್ರತಿಭಟನಾಕಾರರ ಮೇಲೆ ಹರಿಯಾಣ ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ಶನಿವಾರ ನಡೆದಿತ್ತು. ಅದೇ ಸಮಯಕ್ಕೆ ಈ ವಿಡಿಯೋ ವೈರಲ್ ಆಗಿದ್ದು, ಬಿಜೆಪಿ ಸಂಸದ ವರುಣ್ ಗಾಂಧಿ ಸೇರಿದಂತೆ ಹಲವು ಜನರು ಅಧಿಕಾರಿಯ ವರಸೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದೀಗ ಹರಿಯಾಣದ ಡೆಪ್ಯುಟಿ ಸಿಎಂ ದುಷ್ಯಂತ್ ಚೌತಾಲಾ ಅವರು, ಎಸ್ಡಿಎಂ ಆಯುಷ್ ಸಿನ್ಹ ವಿರುದ್ಧ ಖಂಡಿತವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. “ರೈತರ ವಿರುದ್ಧ ಈ ರೀತಿಯ ಶಬ್ದಗಳನ್ನು ಬಳಸುವುದು ಖಂಡನಾರ್ಹ. ನಿಶ್ಚಿತವಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಚೌತಾಲ ಹೇಳಿದ್ದಾರೆ. (ಏಜೆನ್ಸೀಸ್)
15 ವಿದ್ಯಾರ್ಥಿಗಳಿಗೆ ಕರೊನಾ; ನರ್ಸಿಂಗ್ ಕಾಲೇಜು ಸೀಲ್ಡೌನ್
‘ನಮ್ಮ ಮೆಟ್ರೊ’ ನೇರಳೆ ಮಾರ್ಗ ವಿಸ್ತರಣೆಗೆ ಚಾಲನೆ: 6 ಹೊಸ ನಿಲ್ದಾಣಗಳ ಸೇರ್ಪಡೆ