ಸರಗೂರು: ವಿದ್ಯಾರ್ಥಿಗಳು, ಜೀವನದಲ್ಲಿ ಗುರಿ ಮತ್ತು ಛಲ ಬೆಳೆಸಿಕೊಳ್ಳುವುದರ ಜತೆಗೆ ಕಠಿಣ ಪರಿಶ್ರಮದ ಮೂಲಕ ಸಾಧನೆಯ ಹಾದಿಯಲ್ಲಿ ನಡೆಯಬೇಕು ಎಂದು ಅಂಥಾಲಜಿ ಇಂಟರ್ ನ್ಯಾಷನಲ್ ಪ್ರೈವೇಟ್ ಲಿ., ಇಂಡಿಯಾ ಅಧ್ಯಕ್ಷ ಡಾ.ರಾಜ್ ಮೃತ್ಯುಂಜಯಪ್ಪ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪಟ್ಟಣದಲ್ಲಿ ಬುಧವಾರ ಜೆಎಸ್ಎಸ್ ವಿದ್ಯಾಪೀಠದ ಸಹದೊಂದಿಗೆ ಜೆಎಸ್ಎಸ್ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ಕಾಲೇಜು ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಬದುಕಿನಲ್ಲಿ ಬರುವ ಕಷ್ಟ ಮತ್ತು ಸಾಧಿಸಬೇಕೆಂಬ ಛಲದಿಂದ ನಾನು ನನ್ನ ಗುರಿಯನ್ನು ತಲುಪಲು ಸಾಧ್ಯವಾಯಿತು. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಗುರಿಯನ್ನು ನಿಗದಿಪಡಿಸಿಕೊಳ್ಳಬೇಕು. ಆಗ ಯಶಸ್ಸು ಸಾಧ್ಯ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ತಹಸೀಲ್ದಾರ್ ರುಕೀಯಾ ಬೇಗಂ ಮಾತನಾಡಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಸುತ್ತೂರು ಶ್ರೀಗಳು ವಿದ್ಯೆ, ಅನ್ನ, ವಸತಿ ನೀಡಿದ್ದು, ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳ ಜೀವನ ಬೆಳಕಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಸತತ ಪರಿಶ್ರಮ ಪಡಬೇಕು ಎಂದರು.
ವಿದ್ಯಾರ್ಥಿ ಜೀವನದಿಂದಲೇ ಸಮಯ ಪಾಲನೆ, ಆರ್ಥಿಕ ಶಿಸ್ತು, ಸಾಮಾಜಿಕ ಶಿಸ್ತು, ದೇಹಾರೋಗ್ಯ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಧನಾತ್ಮಕ ಚಿಂತನೆ ರೂಢಿಸಿಕೊಳ್ಳಬೇಕು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರ ಜತೆಗೆ ಪ್ರಾಪಂಚಿಕ ಜ್ಞಾನವನ್ನು ಬೆಳೆಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಬೇಕು. ಕೀಳರಿಮೆ ಇರಬಾರದು, ಗುರು ಹಿರಿಯರನ್ನು ಗೌರವಿಸಬೇಕು, ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಮಾಜ ಸೇವಕಿ ಮತ್ತು ಸ್ನೇಹ ಸ್ತ್ರೀ ಸಮಾಜ ಸಂಘದ ಅಧ್ಯಕ್ಷೆ ಸುಧಾ ಮೃತ್ಯುಂಜಯಪ್ಪ ಮಾತನಾಡಿ, ನಮ್ಮ ಶಾಲೆ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವುದನ್ನು ಕಲಿಸುವ ಜತೆಗೆ ಬದುಕುವ ಕಲೆ, ಸಂಸ್ಕಾರ ಹಾಗೂ ಗುಣವಂತಿಕೆಯನ್ನು ಬೆಳೆಸುತ್ತಿದೆ ಎಂದರು.
ಸಾಂಸ್ಕೃತಿಕ ಸ್ಪರ್ಧೆ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು.
ಮುಖ್ಯಶಿಕ್ಷಕ ಮಹಮದ್ ಅಜಂಪಾಷ, ಪ್ರೌಢಶಾಲೆ ಮುಖ್ಯಶಿಕ್ಷಕ ಗಂಗಾಧರಯ್ಯ, ಕಾಲೇಜು ಪ್ರಾಂಶುಪಾಲ ಕೆ.ಎಸ್. ಮಹದೇವಸ್ವಾಮಿ, ಶಿಕ್ಷಕರಾದ ಜಯಣ್ಣ, ಜಯಲಕ್ಷ್ಮಿ, ಶಿಲಾ, ಶ್ವೇತ, ಕೃಷ್ಣಮೂರ್ತಿ, ಬಸವಣ್ಣ, ಸಿದ್ದಲಿಂಗಸ್ವಾಮಿ, ಕಲಾವತಿ, ಕೆ.ವಿ.ಸ್ವಾಮಿ, ಮನೋಜ್ ಕುಮಾರ್, ಮನಿಮಾಲಾ, ದೇಹಾರ ಫಾತೀಮಾ, ಶ್ರೀಮೀತ, ಜಯಶ್ರೀ, ಶಿವಪ್ರಸಾದ್, ಎಚ್.ಎನ್.ಮಹದೇವಸ್ವಾಮಿ, ಸುರೇಶ್, ಡಾ.ಮಹದೇವಸ್ವಾಮಿ ಮತ್ತಿತರರಿದ್ದರು.