ಮೈಸೂರು: ಈ ವರ್ಷದ ಆರಂಭದಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಸ್ಯಾಂಟ್ರೋ ರವಿ ಇದೀಗ ಮತ್ತೊಮ್ಮೆ ಮುನ್ನಲೆಗೆ ಬಂದಿದ್ದಾನೆ. ವೇಶ್ಯಾವಾಟಿಕೆ ದಂಧೆ, ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಹಾಗೂ ಪತ್ನಿಗೆ ಗರ್ಭಪಾತ ಮಾಡಿಸಿದ ಆರೋಪದಲ್ಲಿ ಸದ್ಯ ಬಂಧನದಲ್ಲಿರುವ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ, ಮೈಸೂರಿನ ಜೈಲಿನಲ್ಲಿ ಕಿರಿಕ್ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ಸ್ಯಾಂಟ್ರೋ ರವಿಯ ಕಾಟಕ್ಕೆ ಜೈಲಿನ ಅಧಿಕಾರಿಗಳೇ ಸುಸ್ತಾಗಿದ್ದು, ಆತನನ್ನು ಮೈಸೂರು ಜೈಲಿನಿಂದ ಬೆಂಗಳೂರಿನಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡುವಂತೆ ಏಪ್ರಿಲ್ 13 ರಂದೇ ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು, ನ್ಯಾಯಾಧೀಶರಿಗೆ ಪತ್ರ ಬರೆದಿರುವ ಸಂಗತಿ ಇದೀಗ ಬಯಲಾಗಿದೆ.
ಸದ್ಯ ಸ್ಯಾಂಟ್ರೋ ರವಿ ಮೈಸೂರು ಜೈಲಿನಲ್ಲಿ ವಿಚಾರಣ ಕೈದಿಯಾಗಿದ್ದಾನೆ. ಜೈಲಿನಲ್ಲೂ ತನ್ನ ದರ್ಪ ಮೆರೆಯುತ್ತಿರುವ ರವಿ, ಅಧಿಕಾರಿಗಳ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದಾನೆ. ಜೈಲಿನ ನಿಯಮಗಳನ್ನು ಪಾಲಿಸಲು ಸತಾಯಿಸುತ್ತಿದ್ದಾನೆ. ಸಹ ಕೈದಿಗಳ ಜೊತೆಯೂ ಗಲಾಟೆ ಮಾಡಿಕೊಳ್ಳುತ್ತಿದ್ದಾನೆ.
ಇದನ್ನೂ ಓದಿ: ಪೊಲೀಸರಿಗೆ ಮುಂಬಡ್ತಿ ಪರ್ವ: ಎಸ್ಐ ನೇಮಕಾತಿಗೆ ಕಾನೂನು ತೊಡಕು; ಕಾನ್ಸ್ಟೆಬಲ್ ಭರ್ತಿಗೆ ಕ್ರಮ
ಏಪ್ರಿಲ್ 5 ರಂದು ಸ್ಯಾಂಟ್ರೋ ರವಿಯನ್ನು ಮೈಸೂರು ನ್ಯಾಯಾಲಯಕ್ಕೆ ಕರೆದೊಯ್ದಾಗ ಸಹಬಂಧಿಯ ರಾಮ್ ಜಿ ಖಾನ್ ತಾಯಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಆತನ ಸೆಲ್ಗೆ ಬೀಗ ಹಾಕುವಾಗ ಮತ್ತು ಕೊಠಡಿ ತಪಾಸಣೆ ವೇಳೆ ಸಿಬ್ಬಂದಿಯನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದಾನೆ.
ಇಷ್ಟೇ ಅಲ್ಲದೆ, ಸ್ಯಾಂಟ್ರೋ ರವಿ ಕೊಠಡಿಗೆ ತೆರಳುವ ಪೊಲೀಸರು ತಮ್ಮ ಶೂ ಅನ್ನು ಹೊರಗಡೆ ಬಿಟ್ಟು ಬರಬೇಕು. ನೀವು ಜುಜುಬಿ ವೀಕ್ಷಕರಷ್ಟೇ ಎಂದು ಬಯ್ಯುತ್ತಾನಂತೆ. ಸ್ಯಾಂಟ್ರೋ ರವಿಯ ಹೈಡ್ರಾಮಗಳು ಸಿಬ್ಬಂದಿಯ ಬಾಡಿವೋರ್ನ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಲಾಗಿದೆ.
ನನಗೆ ನಿಮ್ಮ ಮೇಲಾಧಿಕಾರಿಗಳು ಗೊತ್ತಿದ್ದಾರೆ. ನಿಮ್ಮನ್ನು ವರ್ಗಾವಣೆ ಮಾಡಿಸಿ ಬಿಡುತ್ತೇನೆಂದು ಅಧಿಕಾರಿಗಳ ಜೊತೆ ಸ್ಯಾಂಟ್ರೋ ಗಲಾಟೆ ಮಾಡಿದ್ದಾನೆ. ಈತನ ವರ್ತನೆಯಿಂದ ಬೇಸತ್ತಿರುವ ಅಧಿಕಾರಿಗಳು ಇದೀಗ ಆತನನ್ನು ಬೇರೆ ಜೈಲಿಗೆ ವರ್ಗಾಯಿಸುವಂತೆ ನ್ಯಾಯಾಧೀಶರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್)
ಬೌರಿಂಗ್ ಆಸ್ಪತ್ರೆಯಲ್ಲಿ ಸ್ಯಾಂಟ್ರೋ ರವಿ ವೈದ್ಯಕೀಯ ಪರೀಕ್ಷೆ; ಅತ್ತ ಪತ್ನಿಗೆ ಸಿಐಡಿ ವಿಚಾರಣೆ
ಸ್ಯಾಂಟ್ರೋ ರವಿ ಕೇಸ್ ಸಿಐಡಿಗೆ ವರ್ಗಾವಣೆ: ಗೃಹ ಸಚಿವ ಆರಗ ಜ್ಞಾನೇಂದ್ರ
ವೇಷದ ಜತೆಗೆ ಭಾಷೆಯನ್ನೂ ಬದಲಾಯಿಸಿದ್ದ ಸ್ಯಾಂಟ್ರೋ ರವಿ! ಈತನ ಮಾತು ಕೇಳಿ ಪೊಲೀಸರೇ ಅರೆಕ್ಷಣ ಗಲಿಬಿಲಿ