ನವದೆಹಲಿ: ವೀಕ್ಷಕ ವಿವರಣೆಗಾರ ಸಮಿತಿಯಿಂದ ಕೈಬಿಟ್ಟಿದ್ದಕ್ಕೆ ಟೀಮ್ ಇಂಡಿಯಾದ ಮಾಜಿ ಆಟಗಾರ ಹಾಗೂ ಕಾಮೆಂಟರ್ ಸಂಜಯ್ ಮಂಜ್ರೇಕರ್ ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ) ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಟ್ವೀಟ್ ಮೂಲಕ ಪ್ರತಿಕ್ರಿಯಿಸಿ, ನಾನು ಯಾವಾಗಲೂ ಕಾಮೆಂಟರಿಯನ್ನು ಒಂದು ಗೌರವವಾಗಿ ಪರಿಗಣಿಸುತ್ತೇನೆ. ಆದರೆ, ಅದನ್ನೇ ಅರ್ಹತೆ ಅಂದುಕೊಂಡಿಲ್ಲ. ನನ್ನನ್ನು ಆಯ್ಕೆ ಮಾಡಬೇಕೋ? ಬೇಡವೋ ಎಂಬುದು ನನ್ನ ಉದ್ಯೋಗದಾತನಿಗೆ ಬಿಟ್ಟ ವಿಚಾರವಾಗಿದೆ. ನಾನು ಯಾವಾಗಲೂ ಅದನ್ನು ಗೌರವಿಸುತ್ತೇನೆ. ಬಹುಶಃ ಬಿಸಿಸಿಐಗೆ ನನ್ನ ಪ್ರದರ್ಶನ ತೃಪ್ತಿ ತಂದಿಲ್ಲ ಎಂದು ಕಾಣಿಸುತ್ತದೆ. ವೃತ್ತಿಪರನಾಗಿ ನಾನು ಅದನ್ನು ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ,
ದೇಶಿ ಪಂದ್ಯಾವಳಿಗಳಲ್ಲಿ ಸಂಜಯ್ ಮಂಜ್ರೇಕರ್ ಅವರ ಕಾಮೆಂಟರಿ ನಿರಂತವಾಗಿತ್ತು. ಕಳೆದ ಶನಿವಾರ ಬಿಸಿಸಿಐ ತೆಗೆದುಕೊಂಡ ನಿರ್ಧಾರದಿಂದ ಮುಂದಿನ ಐಪಿಎಲ್ ಟೂರ್ನಿಯಲ್ಲಿ ಮಂಜ್ರೇಕರ್ ಅನುಪಸ್ಥಿತಿ ಇರಲಿದೆ. ಪ್ರವಾಸಿ ದಕ್ಷಿಣ ಆಫ್ರಿಕಾ ಮತ್ತು ಆತಿಥೇಯ ಭಾರತ ನಡುವಿನ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲೂ ಮಂಜ್ರೇಕರ್ ಉಪಸ್ಥಿತರಿರಲಿಲ್ಲ.
ಮಂಜ್ರೇಕರ್ ಅವರನ್ನು ಯಾಕೆ ಕೈಬಿಟ್ಟರು ಎಂಬುದಕ್ಕೆ ಇನ್ನೂ ಸ್ಪಷ್ಟತೆ ದೊರಕಿಲ್ಲ. ಆದರೆ, ಮಂಜ್ರೇಕರ್ ಅವರ ಕಾರ್ಯವೈಖರಿ ಆಡಳಿತ ಮಂಡಳಿಗೆ ಸಂತಸ ತಂದಿಲ್ಲ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)
ಕರೊನಾ ವೈರಸ್ ಹುಟ್ಟಿದ್ದು ಎಲ್ಲಿ? Covid-19 ಹೆಸರು ಹೇಗೆ ಬಂತು ಗೊತ್ತಾ?