ಭೋಪಾಲ್: ಶಾಸಕರ ರಾಜೀನಾಮೆಯಿಂದ ಪತನದ ಅಂಚಿನಲ್ಲಿರುವ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. ಇಂದು ನಡೆಯಬೇಕಿದ್ದ ವಿಶ್ವಾಸ ಮತ ಯಾಚನೆಯನ್ನು ಅಮಾನತ್ತಿನಲ್ಲಿ ಇಡಲಾಗಿದ್ದು, ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಾರ್ಚ್ 26ರವರೆಗೆ ಕಲಾಪವನ್ನು ಮುಂದೂಡಲಾಗಿದೆ.
ಗವರ್ನರ್ ಲಾಲ್ಜಿ ಟಂಡನ್ ನಿರ್ದೇಶನದ ಮೇರೆಗೆ ವಿಶ್ವಾಸಮತ ಯಾಚನೆ ನಡೆಯುತ್ತದೆಯೇ? ಎಂಬ ಪ್ರಶ್ನೆ ವಿಧಾನಸಭೆಯಲ್ಲಿ ಕೇಳಿಬಂದ ಹಿನ್ನೆಲೆಯಲ್ಲಿ ಬಹುಮತ ಸಾಬೀತನ್ನು ಮುಂದೂಡಲಾಗಿದೆ.
ಇದರ ನಡುವೆಯೂ ಇಂದು ವಿಧಾನಸಭೆಗೆ ಆಗಮಿಸಿದ ಗವರ್ನರ್ ಕಮಲ್ನಾಥ್ ಸರ್ಕಾರವನ್ನು ಬಹುಮತ ಸಾಬೀತುಪಡಿಸಲು ಕೇಳಿದರು. ಅಲ್ಲದೆ, ಸನದವನ್ನು ಉದ್ದೇಶಿಸಿ ಮಾತನಾಡುತ್ತಾ ಆರಂಭದಲ್ಲೇ ಎಲ್ಲರೂ ಸಂವಿಧಾನವನ್ನು ಅನುಸರಿಸಬೇಕು ಎಂದರು. ಇದರ ಬೆನ್ನಲ್ಲೇ ಗವರ್ನರ್ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್ ಶಾಸಕರು ಸದನವನ್ನು ಗೌರವಿಸಿ ಎಂದರು. ಘೋಷಣೆ ಕೂಗುತ್ತಿದ್ದಂತೆಯೇ ಗವರ್ನರ್ ಸದನ ಬಿಟ್ಟು ಹೊರನಡೆದರು.
ಭಾನುವಾರವಷ್ಟೆ ಸಿಎಂ ಕಮಲ್ನಾಥ್ ನೇತೃತ್ವದಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿತ್ತು. ಗವರ್ನರ್ ಕಳುಹಿಸಿದ ಪತ್ರಕ್ಕೆ ಸಾಂವಿಧಾನಿಕ ಸಿಂಧುತ್ವ ಇರುವುದಿಲ್ಲ. ರಾಜ್ಯ ವಿಧಾನಸಭೆಗೆ ಅವರು ನಿರ್ದೇಶಿಸುವಂತಿಲ್ಲ. ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿ ಎಂದು ಕಾಂಗ್ರೆಸ್ ಶಾಸಕರುಗಳು ಸಭೆಯಲ್ಲಿ ಸಿಎಂ ಕಮಲ್ನಾಥ್ಗೆ ಒತ್ತಾಯಿಸಿದ್ದರು.
ಬಿಜೆಪಿಯವರು ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಂಡಿರುವುದರಿಂದ ವಿಶ್ವಾಸಮತ ಯಾಚನೆ ಮಾಡುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಹಾಗೆಯೇ ಸ್ಪೀಕರ್ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುವುದು ರಾಜ್ಯಪಾಲರ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಿಎಂ ಕಮಲ್ನಾಥ್ ಇಂದು ಬೆಳಗ್ಗೆ ಗವರ್ನರ್ಗೆ ಪತ್ರ ಬರೆದಿದ್ದರು.
ಒಂದು ವೇಳೆ ಸರ್ಕಾರ ವಿಶ್ವಾಸ ಮತಯಾಚನೆ ಮಾಡಲು ಮುಂದಾಗದೇ ಇದ್ದಲ್ಲಿ ಪ್ರತಿಪಕ್ಷವೇ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಬಹುದು ಎಂಬ ಮಾತುಗಳು ಕೇಳಿಬಂದಿದ್ದರಿಂದ ಬಿಜೆಪಿಗೆ ಸಿಎಂ ಕಮಲ್ನಾಥ್ ಅವಿಶ್ವಾಸ ನಿರ್ಣಯ ಮಂಡಿಸಲು ಸವಾಲು ಎಸೆದರು. (ಏಜೆನ್ಸೀಸ್)
ಯೆಸ್ ಬ್ಯಾಂಕ್ ಪ್ರಕರಣದಲ್ಲಿ ಉದ್ಯಮಿ ಅನಿಲ್ ಅಂಬಾನಿಗೆ ಸಂಕಷ್ಟ: ವಿಚಾರಣೆಗೆ ಬರುವಂತೆ ಇಡಿ ಸಮನ್ಸ್
ಆತ್ಮವಿಶ್ವಾಸದೊಂದಿಗೆ ಪರೀಕ್ಷೆ ಬರೆಯಿರಿ: ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಸಚಿವ ಸುರೇಶ್ ಕುಮಾರ್