ಬೆಂಗಳೂರು: ಕೇವಲ ಮೂರು ತಿಂಗಳ ಅವಧಿಯಲ್ಲಿ ಇಡೀ ಪ್ರಪಂಚವನ್ನೇ ಭಯಭೀತವಾಗಿಸಿದ್ದು ಕರೊನಾ ವೈರಸ್. ಚೀನಾದ ಯಾವುದೋ ಮೂಲೆಯಲ್ಲಿ ಪತ್ತೆಯಾದ ಈ ವೈರಸ್ ವಿಶ್ವವ್ಯಾಪಿಯಾಗಿ ಸಾವಿರಾರು ಜೀವಗಳನ್ನು ಬಲಿತೆಗೆದುಕೊಂಡುಬಿಟ್ಟಿದೆ. ಅಷ್ಟಕ್ಕೂ ಈ ವೈರಸ್ ಹುಟ್ಟಿದ್ದು ಎಲ್ಲಿ? ಇದರ ಪರಿಣಾಮಗಳು ಹೇಗಿವೆ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.
ಕರೊನಾ ವೈರಸ್ ಮೊದಲು ಪತ್ತೆಯಾದದ್ದು ಚೀನಾದ ವುಹಾನ್ನಲ್ಲಿರುವ ಮಾಂಸದ ಮಾರುಕಟ್ಟೆಯಲ್ಲಿ. ಎಚ್ಐವಿ, SARS, MERS ಗಳಂತೆಯೇ ಈ ವೈರಸ್ ಕೂಡ ಕಾಡು ಪ್ರಾಣಿಗಳ ಮಾಂಸದಿಂದ ಹುಟ್ಟಿಕೊಂಡಿತು. ಅದರಲ್ಲಿಯೂ ಬಾವುಲಿಯ ಮಾಂಸದಲ್ಲೇ ಈ ವೈರಸ್ ಸೃಷ್ಟಿಯಾಗಿದ್ದು ಎಂದು ಹೇಳಲಾಗಿದೆ. ವುಹಾನ್ ಮಾಂಸದ ಮಾರುಕಟ್ಟೆಯಲ್ಲಿ ಮಾಂಸ ಮಾರುತ್ತಿದ್ದವನ / ಕೊಳ್ಳುತ್ತಿದ್ದವನ ದೇಹದಲ್ಲಿ ಮೊದಲು ಕಾಣಿಸಿಕೊಂಡ ಈ ವೈರಸ್ ನಂತರ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತಾ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿತು.
ಮೊದಲಿಗೆ ಈ ವೈರಸ್ಗೆ ಸೀವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ ಕರೊನಾವೈರಸ್ 2 (SARS-CoV-2) ಎಂದು ಕರೆಯಲಾಗಿತ್ತು. ಆದರೆ SARS ಎಂದರೆ ಜನರಲ್ಲಿ ಭೀತಿ ಹೆಚ್ಚಾಗುತ್ತದೆ ಎನ್ನುವ ಕಾರಣದಿಂದ ಅದಕ್ಕೆ Covid-19 ಎನ್ನುವ ಹೆಸರನ್ನು ಸೂಚಿಸಲಾಯಿತು. ಈ ವೈರಸ್ಗೆ ಟ್ಯಾಕ್ಸಾನಮಿ ಆಫ್ ವೈರಸ್ಗಳ ಅಂತಾರಾಷ್ಟ್ರೀಯ ಸಮಿತಿ (ICTV) ಹೆಸರಿಸಿದೆ.
ಯಾರಿಗೆ ತೊಂದರೆ: ಈ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡಬಲ್ಲದ್ದು. ಹೃದಯದ ಕಾಯಿಲೆ, ಮಧುಮೇಹ, ಹೆಚ್ಚಿನ ಬಿಪಿ, ಕ್ಯಾನ್ಸರ್ನಂತಹ ಕಾಯಿಲೆಗಳಿರುವ ವ್ಯಕ್ತಿಗಳ ಮೇಲೆ ಈ ವೈರಸ್ ಹೆಚ್ಚಿನ ಪರಿಣಾಮ ಬೀರುತ್ತದೆ. ಇಂತಹ ಕಾಯಿಲೆ ಇರುವವರು ಈ ವೈರಸ್ನಿಂದ ಸಾಯುವ ಅಪಾಯ ಹೆಚ್ಚಾಗಿದೆ.
ಆರ್ಥಿಕತೆಗೆ ಪೆಟ್ಟು: ಕರೊನಾ ವೈರಸ್ ಪ್ರಪಂಚದ ಅನೇಕ ದೇಶಗಳ ಆರ್ಥಿಕತೆಯ ಮೇಲೆ ಭಾರೀ ಪರಿಣಾಮವನ್ನು ಬೀರಿದೆ. ಬಹುತೇಕ ಏರ್ಲೈನ್ಗಳು ತಮ್ಮ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದ್ದು, ಇದರಿಂದಾಗಿ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗುತ್ತಿದೆ. ಅನೇಕ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ರಜೆ ಘೋಷಿಸಿವೆ. ಐಟಿ ಬಿಟಿ ಕಂಪನಿಗಳಲ್ಲಿ ಮನೆಯಿಂದಲೇ ಕೆಲಸ ಮಾಡುವಂತೆ ತಿಳಿಸಲಾಗುತ್ತಿದೆ. ಸಿನಿಮಾ ಚಿತ್ರಮಂದಿರಗಳು, ಮಾಲ್ಗಳ ಬಾಗಿಲನ್ನು ಮುಚ್ಚಿಸಲಾಗಿದೆ. ಆ ಕಾರಣ ದೇಶ ವಿದೇಶಗಳಲ್ಲಿ ಈ ವೈರಸ್ ಆರ್ಥಿಕವಾಗಿ ದುಷ್ಪರಿಣಾಮ ಬೀರುತ್ತಿದೆ.
ಜಾಗತಿಕ ಮಟ್ಟದಲ್ಲಿ ಜನರಲ್ಲಿ ಈ ವೈರಸ್ನ ಕುರಿತಾಗಿ ನಿರ್ಲಕ್ಷ್ಯತೆ ಹೆಚ್ಚಾಗಿರುವ ಕಾರಣ ಸೋಂಕನ್ನು ನಿಯಂತ್ರಣಕ್ಕೆ ತರುವುದು ಕಷ್ಟವಾಗುತ್ತಿದೆ. ಸತತ ಮೂರು ತಿಂಗಳ ವೈರಸ್ನ ದಾಳಿಯನ್ನು ಎದುರಿಸಿದ ನಂತರ ಚೀನಾ ಕೊನೆಗೂ ಸುಧಾರಿಸಿದೆ. ಆದರೆ ಬೇರೆ ದೇಶಗಳಲ್ಲಿ ಕಳೆದ ಒಂದು ತಿಂಗಳಿನಿಂದ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು ಜನರು ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ. (ಏಜೆನ್ಸೀಸ್)
ಆತ್ಮವಿಶ್ವಾಸದೊಂದಿಗೆ ಪರೀಕ್ಷೆ ಬರೆಯಿರಿ: ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಸಚಿವ ಸುರೇಶ್ ಕುಮಾರ್
ಯೆಸ್ ಬ್ಯಾಂಕ್ ಪ್ರಕರಣದಲ್ಲಿ ಉದ್ಯಮಿ ಅನಿಲ್ ಅಂಬಾನಿಗೆ ಸಂಕಷ್ಟ: ವಿಚಾರಣೆಗೆ ಬರುವಂತೆ ಇಡಿ ಸಮನ್ಸ್