ಸಂಡೂರು: ಹೋಳಿ ಹುಣ್ಣಿಮೆ ಅಂಗವಾಗಿ ತಾಲೂಕಿನ ಧರ್ಮಾಪುರ ಹೊರ ವಲಯದ ಶ್ರೀಗಂಡಿ ಲಕ್ಷ್ಮೀ ನರಸಿಂಹಸ್ವಾಮಿ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ಪ್ರತಿ ವರ್ಷದಂತೆ ಈ ಬಾರಿಯೂ ಹೋಳಿ ಹುಣ್ಣಿಮೆ ಮೊದಲ ದಿನದಿಂದಲೇ ಶ್ರೀಸ್ವಾಮಿಗೆ ವಿಶೇಷ ಪೂಜಾ ಕಾರ್ಯಗಳು ನಡೆದವು. ಮೊದಲು ಶ್ರೀ ನರಸಿಂಹಸ್ವಾಮಿ ಕಲ್ಯಾಣೋತ್ಸವ ನಡೆಯಿತು. ಬೆಳಗಿನ ಅಲಂಕಾರ ಪೂಜೆಗೆ ರಾಜವಂಶಸ್ಥರಾದ ಅಜಯ್ ಎಂ. ಘೋರ್ಪಡೆ, ಏಕಾಂಬರ್ ಅಜಯ್ ಘೋರ್ಪಡೆ, ಯೋಗೇಂದ್ರ ಸಾವಾಂತ್ ಹಾಗೂ ದೇವಸ್ಥಾನ ಆಡಳಿತಾಧಿಕಾರಿ ಬಿ.ಪ್ರಾಣೇಶ್ ಅಚಾರ್ ಆಗಮಿಸಿದ್ದರು.
ಭಕ್ತರು ರಥದ ಗಾಲಿಗಳಿಗೆ ತೆಂಗಿನಕಾಯಿ, ಬಾಳೆಹಣ್ಣು, ವಿಶೇಷ ನೈವೇದ್ಯ ಸಮರ್ಪಿಸಿ ಭಕ್ತಿ ಮೆರೆದರು. ಉತ್ತತ್ತಿ, ಬಾಳೆ ಹಣ್ಣನ್ನು ತೇರಿನ ಕಳಸಕ್ಕೆ ಎಸೆದು ಕೈಮುಗಿದರು. ತಾಲೂಕಿನ ಧರ್ಮಾಪುರ, ಸಂಡೂರು, ಸುಶೀಲಾನಗರ, ಯಶವಂತನಗರ, ಲಕ್ಷ್ಮೀಪುರ ಇತರ ಗ್ರಾಮಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.