ಬೆಂಗಳೂರು: ಮಾದಕ ಜಾಲದಲ್ಲಿ ಸ್ಯಾಂಡಲ್ವುಡ್ ಭಾಗಿಯಾಗಿದೆ ಎಂಬ ಆರೋಪ ಕುರಿತು ತೀವ್ರ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಮೊದಲ ಹೆಜ್ಜೆಯಾಗಿ ನಟಿ ರಾಗಿಣಿ ದ್ವಿವೇದಿ ಆಪ್ತ ರವಿಶಂಕರ್ ಎಂಬಾತನನ್ನು ಬಂಧಿಸಿದೆ. ಇದೀಗ ವಿಚಾರಣೆ ನಡೆಸುತ್ತಿದ್ದು, ಸಾಕಷ್ಟು ರೋಚಕ ಸಂಗತಿಗಳು ಎಳೆಎಳೆಯಾಗಿ ಬಯಲಾಗುತ್ತಿವೆ.
ಡ್ರಗ್ಸ್ ದಂಧೆಯಲ್ಲಿ ನಟಿ ರಾಗಿಣಿ ಭಾಗಿಯಾಗಿರೋ ಆರೋಪ ಹಿನ್ನೆಲೆಯಲ್ಲಿ ಸಿಸಿಬಿ ಬುಧವಾರಷ್ಟೇ ರಾಗಿಣಿಗೆ ನೋಟಿಸ್ ನೀಡಿ ಇಂದು ವಿಚಾರಣೆಗೆ ಹಾಜರಾಗಲು ಹೇಳಿತ್ತು. ಆದರೆ ತಲೆಮರೆಸಿಕೊಂಡಿರುವ ರಾಗಿಣಿ ವಕೀಲರೊಂದಿಗೆ ಇದರಿಂದ ಪಾರಾಗುವ ದಾರಿ ನೋಡುತ್ತಿದ್ದು, ಸೋಮವಾರ ಹಾಜರಾಗುತ್ತೇನೆಂದು ಟ್ವೀಟ್ ಮೂಲಕ ಹೇಳಿದ್ದಾರೆ. ಆದರೆ, ಇದನ್ನು ನಿರಾಕರಿಸಿರುವ ಸಿಸಿಬಿ ಇದೀಗ ಮತ್ತೊಂದು ನೋಟಿಸ್ ಹೊರಡಿಸಿದ್ದು, ನಾಳೆಯೇ ಹಾಜರಾಗಲು ಬುಲಾವ್ ನೀಡಿದೆ.
ಇದನ್ನೂ ಓದಿ: ನಾನು ಬಚ್ಚಿಟ್ಟುಕೊಳ್ಳೋಕೆ ದಾವೂದ್ ಅಥವಾ ಲಾಡೆನ್ ಅಲ್ಲ …
ಇತ್ತ ರಾಗಿಣಿ ಆಪ್ತ ರವಿಶಂಕರ್ನನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ಸಾಕಷ್ಟು ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಸ್ಫೋಟಕ ಮಾಹಿತಿಗಳನ್ನು ನೀಡಿರುವ ರವಿಶಂಕರ್, ನಾನು ರಾಗಿಣಿ ಜತೆ ಲಿವಿಂಗ್ ಟುಗೆದರ್ ಶಿಪ್ನಲ್ಲಿದ್ದೀನಿ ಎಂದು ಒಪ್ಪಿಕೊಂಡಿರುವುದಾಗಿ ಸಿಸಿಬಿ ಮೂಲಗಳಿಂದ ತಿಳಿದುಬಂದಿದೆ.
ಇನ್ನು ಆರ್ಟಿಒ ಕಚೇರಿಯಲ್ಲಿ ಅಧಿಕಾರಿಯಾಗಿರುವ ರವಿಶಂಕರ್ ಸಂಬಳ ತಿಂಗಳಿಗೆ 30 ರಿಂದ 35 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಆದರೆ, ರಾಗಿಣಿಗೆ ಒಂದು ಲಕ್ಷ ರೂ. ಖರ್ಚು ಮಾಡುತ್ತಿದ್ದೆ ಎಂದು ಹೇಳಿದ್ದಾನೆನ್ನಲಾಗಿದೆ. ಆದರೆ, ತನ್ನ ಸಂಬಳದಲ್ಲಿ ಹೇಗೆ ನಿಭಾಯಿಸುತ್ತಿದ್ದ ಅನ್ನೋದೆ ಇದೀಗ ಸಿಸಿಬಿ ಅಧಿಕಾರಿಗಳ ಮುಂದಿರುವ ಬಹುದೊಡ್ಡ ಪ್ರಶ್ನೆಯಾಗಿದೆ.
ಅಚ್ಚರಿಯೆಂದರೆ ರವಿಶಂಕರ್ ಹಾಕೋ ಟೀ-ಶರ್ಟ್ ಬೆಲೆನೇ 30-35 ಸಾವಿರ ರೂ., ಹೀಗಾಗಿ ಆತನ ಆದಾಯದ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದು, ರವಿಶಂಕರ್ ಹೇಳಿಕೆ ದಾಖಲಿಸಿಕೊಂಡಿರುವ ಸಿಸಿಬಿ ಅಧಿಕಾರಿಗಳು ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಾಗಿಣಿ ಅವರನ್ನು ಸಿಸಿಬಿ ವಿಚಾರಣೆಗೆ ಕರೆದಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ರಾಗಿಣಿ ಆಪ್ತ ರವಿಶಂಕರ್ ಸಿಸಿಬಿ ಬಲೆಗೆ ಹೇಗೆ ಬಿದ್ದ!
ರವಿಶಂಕರ್ ಬಳಿಯಿತ್ತು ಮೂರು ಮೊಬೈಲ್
ರವಿಶಂಕರ್ ಬಳಿಯಿದ್ದ ಮೂರು ಮೊಬೈಲ್ನಲ್ಲಿ ಈಗಾಗಲೆ ಎರಡು ಮೊಬೈಲ್ ಅನ್ನು ಸಿಸಿಬಿ ವಶಕ್ಕೆ ಪಡೆದಿದೆ. ರವಿಶಂಕರ್ ನಿನ್ನೆಯೆ ತನ್ನ ಸ್ನೇಹಿತನಿಗೆ ಒಂದು ಮೊಬೈಲ್ ಕೊಟ್ಟು ಕಳುಹಿಸಿದ್ದ. ಇದೇ ಮೊಬೈಲ್ನಿಂದ ಡ್ರಗ್ ಡೀಲ್ ಮಾಡುತ್ತಿದ್ದನಾ ಎಂಬ ಗುಮಾನಿ ಶುರುವಾಗಿದೆ. ಪ್ರತಿ ಡೀಲಿಂಗ್ ಬಳಿಕ ಮೊಬೈಲ್ ಸ್ವಿಟ್ಚ್ ಆಫ್ ಮಾಡ್ತಿದ್ದ ಎನ್ನಲಾಗಿದೆ. ಸದ್ಯ ಸಿಸಿಬಿ ಪೊಲೀಸರು ಆ ಮೊಬೈಲ್ ಹಿಂದೆ ಬಿದ್ದಿದ್ದಾರೆ.
ವೈದ್ಯಕೀಯ ತಪಾಸಣೆ
ಮುಖಕ್ಕೆ ರೌಂಡ್ ಕರ್ಚೀಫ್ ಕಟ್ಟಿಕೊಂಡು ಸಿಸಿಬಿ ಕಚೇರಿಯಿಂದ ಹೊರಗೆ ಬಂದ ರವಿಶಂಕರ್ನನ್ನು ಸಿಸಿಬಿ ಅಧಿಕಾರಿಗಳು ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯಕೀಯ ತಪಾಸಣೆಯ ನಂತರ ಆತನನ್ನು ಐದು ದಿನ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಮತ್ತಷ್ಟು ವಿಚಾರಣೆ ನಡೆಸಲಿದ್ದಾರೆ. (ದಿಗ್ವಿಜಯ ನ್ಯೂಸ್)