| ಶಿವರಾಜ ಎಂ.
ಬೆಂಗಳೂರು ಗ್ರಾಮಾಂತರ: ಸಂಗೀತಗಾರ, ನಾಟಕಕಾರ, ಉತ್ತಮ ಕಲಾವಿದ, ಗಾಯಕ ಅಬ್ಬಾ ಒಂದಾ ಎರಡಾ… ಸಕಲ ಕಲಾವಲ್ಲಭ.. ಓದಿದ್ದು ಇಂಜಿನಿಯರಿಂಗ್ ಆದರೂ ಕಲಾವಿದನಾಗಬೇಕೆಂಬ ತುಡಿತದಿಂದ ಸಾಧನೆಯ ಮೆಟ್ಟಿಲು ಹತ್ತುತ್ತಾ ಸಂಚಾರ ಆರಂಭಿಸಿದ ‘ವಿಜಯ್’ ಕಣ್ಣಮುಂದೆಯೇ ಕಾಲನ ಕರೆಗೆ ಓಗೊಟ್ಟುಬಿಟ್ಟನೇ…ಸತ್ಯ ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ…
ಸಂಚಾರಿ ವಿಜಯ್ ಅವರೊಂದಿಗೆ ಸತತ 8 ವರ್ಷ ಹಾಸ್ಟೆಲ್ನಲ್ಲಿ ಕೊಠಡಿ ಹಂಚಿಕೊಂಡಿದ್ದ ಗ್ರಾಮಾಂತರ ಜಿಲ್ಲೆ ಅಪರ ಜಿಲ್ಲಾಧಿಕಾರಿ ಡಾ. ಜಗದೀಶ್ ಕೆ. ನಾಯಕ್ ವಿಜಯವಾಣಿಯೊಂದಿಗೆ ನೆನಪಿನ ಬುತ್ತಿ ತೆರೆದಿಟ್ಟಿದ್ದು ಹೀಗೆ. ಎಂಬಿಬಿಎಸ್ ಓದುತ್ತಿದ್ದ ಜಗದೀಶ್ ಕೆ.ನಾಯಕ್ ಹಾಗೂ ಇಂಜಿನಿಯರಿಂಗ್ ಓದುತ್ತಿದ್ದ ಸಂಚಾರಿ ವಿಜಯ್ 8 ವರ್ಷ ಬೆಂಗಳೂರಿನ ವಿದ್ಯಾಪೀಠ ಸರ್ಕಲ್ನಲ್ಲಿನ ಸರ್ಕಾರಿ ಎಂಎನ್ಡಿ ಹಾಸ್ಟೆಲ್ನಲ್ಲಿ ರೂಂಮೇಟ್ ಆಗಿದ್ದವರು. ಶಿಕ್ಷಣ ಪೂರೈಸಿ ಜಗದೀಶ್ ಅವರು ಸರ್ಕಾರಿ ಹುದ್ದೆ ಹಿಡಿದರೆ ವಿಜಯ್ ಬಾಗಿಲು ತಟ್ಟಿದ್ದು ಕಲಾಲೋಕವನ್ನು.
ಇನ್ನೇನ್ರಪ್ಪ:
ಹಾಸ್ಟೆಲ್ನಲ್ಲಿದ್ದಾಗ ರೂಂಮೇಟ್ಗಳಿಗೆ ಅಡುಗೆ ಮಾಡಿ ಉಣಬಡಿಸುವುದರಿಂದ ಹಿಡಿದು ಎಲ್ಲ ಕೆಲಸಗಳನ್ನು ಟಾಟ್ ಮುಗಿಸಿ ಇನ್ನೇನ್ರಪ್ಪ ಎಂದು ಕಣ್ಣು ಹೊಡೆಯುತ್ತಿದ್ದ ಆತನ ಪಾದರಸದಂತಹ ಚಟುವಟಿಕೆ ನನ್ನ ಕಣ್ಣ ಮುಂದೆಯೇ ಹಾದುಹೋಗುತ್ತಿದೆ ಎಂದು ಕಣ್ಣೀರಾದರು ಜಗದೀಶ್ ನಾಯಕ್.
ಸಾಧಿಸಿಯೂ ಬಿಟ್ಟ!:
ಇಂಜಿನಿಯರಿಂಗ್ ಮುಗಿಸಿದ ಬಳಿಕ ಆತನಿಗೆ ಸಾಕಷ್ಟು ಉತ್ತಮ ಹುದ್ದೆಗಳ ಅವಕಾಶ ಬಂದರೂ ಅದನ್ನು ತಿರಸ್ಕರಿಸಿದ ವಿಜಯ್, ನಾನೊಬ್ಬ ಕಲಾವಿದನಾಗಬೇಕೆಂಬ ಹಟ ತೊಟ್ಟಿದ್ದ. ಅಂದುಕೊಂಡದ್ದನ್ನು ಸಾಧಿಸಿಯೂ ಬಿಟ್ಟ. ರಾಷ್ಟ್ರ ಪ್ರಶಸ್ತಿ ಬಂದಾಗ ಬಲೇ ವಿಜಯ್ ಎಂದು ಬೆನ್ನು ತಟ್ಟಿದ್ದೆವು. ಮತ್ತಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳಲಿದ್ದ ಪ್ರಾಣ ಸ್ನೇಹಿತ ಇನ್ನಿಲ್ಲ ಎಂಬುದನ್ನು ಕಲ್ಪಿಸಿಕೊಳ್ಳುವುದೂ ಕಷ್ಟವಾಗುತ್ತಿದೆ ಎಂದು ನೊಂದುಕೊಳ್ಳುತ್ತಾರೆ ಜಗದೀಶ್.
ಏ.17 ಕಡೆಯ ಭೇಟಿ:
ಸದಾ ಫೋನ್, ವ್ಯಾಟ್ಸ್ಆ್ಯಪ್ಗಳಲ್ಲಿ ಸಂಪರ್ಕದಲ್ಲಿದ್ದ ವಿಜಯ್ ಏ. 17 ರಂದು ನಾವಿದ್ದ ಹಾಸ್ಟೆಲ್ಗೆ ತೆರಳಿ ವಿದ್ಯಾರ್ಥಿಗಳಿಗೆ ಕೆಲವೊಂದು ಪುಸ್ತಕಗಳನ್ನು ಉಡುಗೊರೆ ನೀಡಿ ಹುರಿದುಂಬಿಸಿದ್ದ. ನಾನು ಜತೆಯಲ್ಲಿದ್ದೆ. ಕಾಫಿ ಕುಡಿದು ಒಂದಷ್ಟು ಹರಟೆ ಹೊಡೆದು ಸಿಕ್ತೀನಿ ಅಂತಾ ಹೋದವನು ಮರಳಿ ಬಾರದ ಲೋಕಕ್ಕೆ ಇಷ್ಟು ಬೇಗ ತೆರಳುತ್ತಾನೆ ಅಂದುಕೊಂಡಿರಲಿಲ್ಲ ಎಂದು ಜಗದೀಶ್ ನಾಯಕ್ ಕಂಬನಿ ಮಿಡಿದರು.
ಸಂಚಾರಿ ವಿಜಯ್ ನಿಧನಕ್ಕೆ ಕನ್ನಡದಲ್ಲಿ ಸಂತಾಪ ಸೂಚಿಸಿದ ಅಮೆರಿಕ ರಾಯಭಾರ ಕಚೇರಿ
ಇಬ್ಬರು ಅಂಧರಿಗೆ ಬೆಳಕು ನೀಡಿದ ವಿಜಯ್ ಕಣ್ಣುಗಳು: ಮಹಿಳೆಗೆ ಕಿಡ್ನಿ ಕಸಿ ಸಕ್ಸಸ್