ಮುಂಬೈ: ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಮನೆಯ ಹೊರಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ದಿನದ ನಂತರ ಮುಂಬೈ ಅಪರಾಧ ವಿಭಾಗದ ಪೊಲೀಸರು ಇಬ್ಬರು ಶಂಕಿತರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ‘ವಿಮಾನ ನಿಲ್ದಾಣವಿರಲಿ, ಮೊದಲು ಬಸ್ ನಿಲ್ದಾಣ ನಿರ್ಮಿಸಿ’: ಆರ್ಜೆಡಿ ಭರವಸೆಗೆ ನೆಟಿಜನ್ಸ್ ಪ್ರತಿಕ್ರಿಯೆ ಹೀಗಿದೆ ನೋಡಿ..
ಸ್ಥಳೀಯ ಪೊಲೀಸರು ಪ್ರಾಥಮಿಕ ತನಿಖೆಯ ನಂತರ, ಪ್ರಕರಣವನ್ನು ಭಾನುವಾರ ರಾತ್ರಿ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಯಿತು.
ಪೊಲೀಸರ ಪ್ರಕಾರ, ಭಾನುವಾರ ಮುಂಜಾನೆ 5 ಗಂಟೆಗೆ ಬಾಂದ್ರಾದ ಸಲ್ಮಾನ್ ಗ್ಯಾಲಕ್ಸಿ ಅಪಾರ್ಟ್ಮೆಂಟ್ನ ಹೊರಗೆ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಐದು ಸುತ್ತು ಗುಂಡು ಹಾರಿಸಿದ್ದಾರೆ. ಆ ಪ್ರದೇಶದ ಸಿಸಿಟಿವಿ ದೃಶ್ಯ ಆನ್ಲೈನ್ನಲ್ಲಿ ಕಾಣಿಸಿಕೊಂಡಿದ್ದು, ಇಬ್ಬರು ಶೂಟರ್ಗಳನ್ನು ಪೊಲೀಸರು ಗುರುತಿಸಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ, ಶೂಟರ್ಗಳು ಬಳಸಿದ ಬೈಕ್ ಸಲ್ಮಾನ್ ಮನೆ ಸಮೀಪದ ಮೌಂಟ್ ಮೇರಿ ಚರ್ಚ್ ಬಳಿ ನಿಲ್ಲಿಸಿರುವುದು ಪತ್ತೆಯಾಗಿದೆ. ಇನ್ನು ಸಲ್ಮಾನ್ ನಿವಾಸದ ಹೊರಗೆ ನಿತ್ಯ ಇರುತ್ತಿದ್ದ ಪೊಲೀಸ್ ವ್ಯಾನ್ ಭಾನುವಾರ ಕಾಣೆಯಾಗಿತ್ತು ಎಂದು ವರದಿಗಳು ತಿಳಿಸಿವೆ.
ಏತನ್ಮಧ್ಯೆ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸದಸ್ಯ ಅನ್ಮೋಲ್ ಬಿಷ್ಣೋಯ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ. ಭಾನುವಾರ ಫೇಸ್ಬುಕ್ ಪೋಸ್ಟ್ನಲ್ಲಿ ಫೈರಿಂಗ್ ಕೇವಲ “ಟ್ರೇಲರ್” ಎಂದು ಅವನು ಹೇಳಿದ್ದಾನೆ. ಸಲ್ಮಾನ್ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾನೆ
ಲಾರೆನ್ಸ್ ಬಿಷ್ಣೋಯ್ ಜತೆಗಿನ ಸಲ್ಮಾನ್ ದ್ವೇಷ ಹಲವಾರು ವರ್ಷದ ಹಿಂದಿನದು. 1998 ರಲ್ಲಿ ಸಲ್ಮಾನ್ ಕೃಷ್ಣಮೃಗ ಬೇಟೆಯಾಡಿದ ಕಾರಣ ಗುರಿಯಾಗಿಸಿಕೊಂಡಿದ್ದಾರೆ.
ಸಲ್ಮಾನ್ ಗೆ 2022 ರಲ್ಲಿ ಮಹಾರಾಷ್ಟ್ರ ಪೊಲೀಸರು ವೈ+ ಭದ್ರತೆಯನ್ನು ನೀಡಿದ್ದರು. ಭಾನುವಾರದ ಗುಂಡಿನ ದಾಳಿಯ ನಂತರ ಅವರ ನಿವಾಸದ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಘಟನೆಯ ಕುರಿತು ಸಲ್ಮಾನ್ ಇನ್ನೂ ಅಧಿಕೃತ ಹೇಳಿಕೆ ನೀಡದಿದ್ದರೂ, ಕುಟುಂಬವು ವಿಚಲಿತವಾಗಿಲ್ಲ. ದುಷ್ಕರ್ಮಿಗಳು ಪ್ರಚಾರಕ್ಕಾಗಿ ಮಾತ್ರ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.