ಸಿರಗುಪ್ಪ: ಕನ್ನಡ ನಾಡು ನುಡಿ ಅಭಿವೃದ್ಧಿಗಾಗಿ ಕಸಾಪ, ಸಾಹಿತ್ಯ ಸಮ್ಮೇಳನ ಆಯೋಜಿಸುತ್ತಿದ್ದು, ಎಲ್ಲರ ಸಹಕಾರ ಅಗತ್ಯವಿದೆ ಎಂದು ತಹಸೀಲ್ದಾರ್ ಎಸ್.ಬಿ.ಕೂಡಲಗಿ ಹೇಳಿದರು. ಸೋಮವಾರ ನಗರಕ್ಕೆ ಆಗಮಿಸಿದ 21ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಚಾರದ ಕನ್ನಡ ತೇರು ಸ್ವಾಗತಿಸಿ ಶ್ರೀ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಫೆ.1, 2ರಂದು ಬಳ್ಳಾರಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೋರಿದರು. ಕಸಾಪ ತಾಲೂಕು ಅಧ್ಯಕ್ಷ ಎಸ್.ಎಂ.ನಾಗರಾಜ ಸ್ವಾಮಿ ಮಾತನಾಡಿದರು. ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ, ಬಿಇಒ ಪಿ.ಡಿ.ಭಜಂತ್ರಿ, ಸಿಪಿಐ ಟಿ.ಆರ್.ಪವಾರ್, ಕಸಾಪ ಜಿಲ್ಲಾ ಸಂಚಾಲಕ ಎಂ.ಪಂಪಾಪತಿ ಇತರರಿದ್ದರು.