ಸಾಗರ: ಇಡೀ ರಾಜ್ಯದ ಕಲಾ ಭೂಪಟದಲ್ಲಿ ಸಾಗರಕ್ಕೆ ತನ್ನದೇ ಆದ ವೈಶಿಷ್ಟೃವಿದೆ. ಇಲ್ಲಿನ ಕಲಾವಿದರು ತಮ್ಮ ಪ್ರತಿಭೆಯಿಂದಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಕಂಡಿದ್ದಾರೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರಸಭೆ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಮಾಸ್ಟರ್ ಶಂಕರ್ ಕಲಾವೃಂದ್ರ ಟ್ರಸ್ಟ್ನ 33ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ವಿ.ಶಂಕರ್ ಬಹುಮುಖ ಪ್ರತಿಭೆಯ ಕಲಾವಿದ. ಇಂದು ಅವರ ಆರು ಪುಸ್ತಕಗಳು ಲೋಕಾರ್ಪಣೆಗೊಂಡಿರುವುದು ವಿಶೇಷ. ಒಬ್ಬ ವ್ಯಕ್ತಿಗೆ ಸಮಾಜದಲ್ಲಿ ತಾನು ಬೆಳೆಯಬೇಕು, ಇನ್ನೊಬ್ಬರನ್ನು ಬೆಳೆಸಬೇಕು ಎನ್ನುವ ವಿಶಾಲವಾದ ಹೃದಯವಂತಿಕೆ ಇರಬೇಕು. ಆಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದರು.
ಹಿರಿಯ ಸಾಹಿತಿ ಡಾ. ನಾ.ಡಿಸೋಜ ಮಾತನಾಡಿ, ಇತಿಹಾಸಗಳು ಪುಸ್ತಕಗಳಾಗಿವೆ. ಪುಸ್ತಕಗಳು ಇತಿಹಾಸವನ್ನು ನೆನಪಿಸುವಂತೆ ಇರಬೇಕು. ನಾವು ಮಾಡುವ ಕೆಲಸಗಳು ದಾಖಲಾಗುವ ಜತೆಗೆ ಮುಂದಿನ ಪೀಳಿಗೆಗೆ ಅದು ಮಾರ್ಗಸೂಚಿ ಆಗಬೇಕು. ಇಂದು ಶಂಕರ್ ಅವರ ದಣಿವರಿಯದ ನಾಯಕ ಕಾಗೋಡು ತಿಮ್ಮಪ್ಪ, ನೀರೆ, ಹೆಣ್ಣೇ ನೀ ಅಬಲೆಯಲ್ಲ, ನಾನು ಕಂಡ ಸಾಗರ ರಂಗಭೂಮಿ, ಸರ್ಕಾರಿ ಶಾಲೆ ಪ್ರೀತಿ ಇರಲಿ ಮತ್ತು ವಿ.ಟಿ.ಸ್ವಾಮಿ ಸಂಪಾದಕತ್ವದಲ್ಲಿ ಹೊರಬಂದಿರುವ ಶಂಕರ ಗಾನ ಯಾನ ಏಕಕಾಲದಲ್ಲಿ ಬಿಡುಗಡೆಯಾಗಿದೆ. ಈ ಮೂಲಕ ಲೇಖಕರು ತಮ್ಮಲ್ಲಿರುವ ಆಸಕ್ತಿದಾಯಕ ಕ್ಷೇತ್ರದ ಮೇಲೆ ಬೆಳಕು ಚೆಲ್ಲಿರುವುದು ಸ್ವಾಗತಾರ್ಹ ಕೆಲಸ. ಕೆಳದಿ ಅರಸರು ಕಲೆ, ಸಾಹಿತ್ಯ, ಸಂಸ್ಕೃತಿಗೆ ಆಶ್ರಯ ನೀಡಿದ್ದರು. 500 ವರ್ಷಗಳ ಹಿಂದೆಯೇ ಸಾಗರ ಕ್ಷೇತ್ರದಲ್ಲಿ ಕೆಳದಿ ಅರಸರು ರಂಗಮಂಟಪ ನಿರ್ಮಿಸಿದ್ದರು ಎನ್ನುವ ಉಲ್ಲೇಖವಿದೆ. ಕಲಾವಿದರಿಗೆ ಅವಶ್ಯಕ ಇರುವ ರಂಗಮಂದಿರ ಕೂಡಲೇ ನಿರ್ಮಾಣ ಆಗಬೇಕು. ಆ ಮೂಲಕ ಕಲಾವಿದರ ಚಟುವಟಿಕೆಗಳಿಗೆ ಅನುಕೂಲ ಆಗಬೇಕು ಎಂದು ಹೇಳಿದರು.
ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ಡಾ. ನಾ.ಡಿಸೋಜ, ಪ್ರಮುಖರಾದ ಸಂಪತ್ ಕುಮಾರ್, ಶಂಕರ್ ಆಚಾರ್, ಗಿರಿಜಮ್ಮ ರಾಮಣ್ಣ, ಜಗದೀಶ್ ಒಡೆಯರ್, ಜೆ.ಎಸ್.ಮಾಧವಾಚಾರ್, ಎಸ್.ಮೋಹನ್ ಮೂರ್ತಿ, ಶೋಭಾ ಲಂಬೋಧರ್, ವಾಸುದೇವಮೂರ್ತಿ, ನಿತ್ಯಾನಂದ ಶೆಟ್ಟಿ, ರಾಜು ಜನ್ನೆಹಕ್ಲು, ಮಾಲತಿ ರಾಜಶೇಖರ್, ಶೀಲಾ ನಾಗರಾಜ್ ಶಿರೂರು, ರಿಧಿ ಲ್ಯಾವಿಗೆರೆ, ಸಿ.ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತ ಸಾಧಕರ ಕುರಿತು ದೀಪಕ್ ಸಾಗರ ಅಭಿನಂದನಾ ಭಾಷಣ ನೆರವೇರಿಸಿದರು.
ಪ್ರಮುಖರಾದ ಎಸ್.ಬಿ.ರಘುನಾಥ್, ವಿ.ಶಂಕರ್, ಮಾ.ಸ.ನಂಜುಂಡಸ್ವಾಮಿ, ಆರ್.ಶ್ರೀನಿವಾಸ್, ಶಿವಮೂರ್ತಿ, ವಿ.ಟಿ.ಸ್ವಾಮಿ, ಗಣಪತಿ ಮಂಡಗಳಲೆ, ಸುರೇಶಬಾಬು, ಕೃಷ್ಣಮೂರ್ತಿ ಭಂಡಾರಿ, ಸತೀಶ್ ಮೊಗವೀರ, ಕೆ.ನಾಗರಾಜ್, ಅಜೇಯ, ಕೆ.ವಿ.ಜಯರಾಮ್, ಉಮೇಶ್ ಹಿರೇನೆಲ್ಲೂರು, ವಿನಾಯಕ ಗುಡಿಗಾರ್, ಜಿ.ಎಸ್.ಅರುಣ್ ಇತರರಿದ್ದರು. ಸಹನಾ ಭಟ್ ಪ್ರಾರ್ಥಿಸಿದರು. ಅರ್ಚನಾ ವಸಂತ್ ಸ್ವಾಗತಿಸಿದರು. ಎಚ್.ಎಲ್.ರಾಘವೇಂದ್ರ ಪ್ರಾಸ್ತಾವಿಕ ಮಾತನಾಡಿದರು. ಅರುಣಕುಮಾರ್ ವಂದಿಸಿದರು. ಉಮೇಶ್ ಅಂಕೋಲ ನಿರೂಪಿಸಿದರು.