ಉಪ್ಪಿನಬೆಟಗೇರಿ: ಅಡುಗೆ ಅನಿಲ ಸೋರಿಕೆಯಿಂದ ಹೊತ್ತಿಕೊಂಡ ಬೆಂಕಿಗೆ ಮಹಿಳೆಯೊಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡ ಘಟನೆ ಧಾರವಾಡ ತಾಲೂಕಿನ ಕಲ್ಲೆ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಮಹಾದೇವಿ ವಗೇಣ್ಣವರ (30) ಮೃತಪಟ್ಟ ಮಹಿಳೆ. ಘಟನೆಯಲ್ಲಿ ಸುರೇಶ ವಗೇಣ್ಣವರ, ಶ್ರೀಧರ ವಗೇಣ್ಣವರ, ಚಿನ್ನಪ್ಪ ವಗೇಣ್ಣವರ ಹಾಗೂ ಗಂಗವ್ವ ವಗೇಣ್ಣವರ ಎಂಬುವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಹಿನ್ನೆಲೆ: ಬೆಳಗ್ಗೆ ಗ್ಯಾಸ್ ಸಿಲಿಂಡರ್ ಲಿಕೇಜ್ ಆಗಿತ್ತು. ಏಕಾಏಕಿ ಸ್ಪಾರ್ಕ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಮನೆ ತುಂಬ ಬೆಂಕಿ ಆವರಿಸಿ ಅನಾಹುತ ಸಂಭವಿಸಿದೆ. ಅಡುಗೆ ಮನೆಯಲ್ಲಿದ್ದ ಮಹಾದೇವಿ ಹೊರಗಡೆ ಬರಲಾಗದೇ ಮೃತಪಟ್ಟಿದ್ದಾಳೆ. ಅಕ್ಕಪಕ್ಕದ ಮನೆಯವರು ಹರಸಾಹಸ ಪಟ್ಟು ಗುದ್ದಲಿ, ಹಾರೆಗಳಿಂದ ಮನೆಯ ಗೋಡೆಗಳನ್ನು ಒಡೆದು ರಕ್ಷಣೆಗೆ ಮುಂದಾಗಿದ್ದಾರೆ. ಅಷ್ಟರಲ್ಲಾಗಲೇ ಬೆಂಕಿಯ ಕೆನ್ನಾಲಿಗೆಗೆ ಮಹಾದೇವಿಯ ದೇಹ ಸಂಪೂರ್ಣ ಸುಟ್ಟು ಬೆಂದು ಹೋಗಿತ್ತು. ಒಂದೇ ಮನೆಯಲ್ಲಿ ಮೂರು ಕುಟುಂಬಗಳು ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಬಾಕಿ ಉಳಿದವರು ಗ್ರಾಮಸ್ಥರ ಸಹಾಯದಿಂದ ಹೊರ ಬಂದಿದ್ದಾರೆ. ಅವರಿಗೂ ಗಾಯಗಳಾಗಿವೆ. ಅಕ್ಕಪಕ್ಕವೇ ಎರಡು ಸಿಲಿಂಡರ್ ಇದ್ದವು ಆದರೆ, ಅವುಗಳಿಂದ ಬೆಂಕಿ ಸ್ಪೋಟಗೊಂಡಿಲ್ಲ. ಇದರಿಂದ ಮತ್ತೊಂದು ದೊಡ್ಡ ಅನಾಹುತ ತಪ್ಪಿದಂತಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು, ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.