ಬೆಂಗಳೂರು: ವರದಕ್ಷಿಣೆ ಕಿರುಕುಳ ಪ್ರಕರಣ ಸಂಬಂಧ ಹೇಳಿಕೆ ಕೊಡಲು ಬಂದಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸಬ್ಇನ್ಸ್ಪೆಕ್ಟರ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಅಲ್ಲದೇ ಸೇವೆಯಿಂದ ಅಮಾನತು ಮಾಡಿ ಪೊಲೀಸ್ ಇಲಾಖೆ ಆದೇಶಿಸಿದೆ.
ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಸದ್ದುಗುಂಟೆಪಾಳ್ಯ ಠಾಣೆಯಲ್ಲಿ ಪಿಎಸ್ಐ ಮಂಜುನಾಥ ಸ್ವಾಮಿ ವಿರುದ್ಧ ಐಪಿಸಿ ಸೆಕ್ಷನ್ 354ಎ ಮತ್ತು 354ಡಿ ಅನ್ವಯ ಎಫ್ಐಆರ್ ದಾಖಲು ಮಾಡಲಾಗಿದೆ. ಮಹಿಳಾ ಸಾಕ್ಷಿದಾರರನ್ನು ವಿಚಾರಣೆ ಮಾಡುವ ಸಂಬಂಧ ಇಲಾಖೆಯಲ್ಲಿ ನೀಡಿರುವ ಮಾರ್ಗದರ್ಶಿ ನಿಯಮಗಳನ್ನು ಉಲ್ಲಂಸಿದ್ದಾರೆ. ಅಲ್ಲದೆ, ಠಾಣೆಗೆ ಬಂದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ದುರ್ವರ್ತನೆ ತೋರಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದ್ದರಿಂದ ಸೇವೆಯಿಂದ ಸಹ ಅಮಾನತು ಮಾಡಲಾಗಿದೆ ಎಂದು ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ. ಬಾಬಾ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಯಲ್ಲಿ ಇರುವವರು ಕಾಳಸಂತೆಕೋರರು, ಬೆಟ್ಟಿಂಗ್ ದಂಧೆಕೋರರು: ಎಚ್.ಡಿ.ಕುಮಾರಸ್ವಾಮಿ ಆರೋಪ
ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಸಾಕ್ಷಿ ಹೇಳಿಕೆ ನೀಡಲು ಠಾಣೆಗೆ ಏಪ್ರಿಲ್ 8ರ ಸಂಜೆ 7 ರಿಂದ 8.30ರ ನಡುವೆ ಮಹಿಳೆ ಬಂದಿದ್ದರು. ಈ ವೇಳೆ ಪಿಎಸ್ಐ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಟ್ವಿಟರ್ನಲ್ಲಿ ಸಂತ್ರಸ್ತೆ ಸರಣಿ ಟ್ವೀಟ್ ಮಾಡಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡು ಮಹಿಳೆ, ಜತೆಗೆ ಮಾತನಾಡಿ ಲಿಖಿತ ದೂರು ನೀಡಿದರೇ ಎಫ್ಐಆರ್ ಮಾಡುವುದಾಗಿ ಸಲಹೆ ನೀಡಲಾಗಿತ್ತು.
ಮಂಗಳವಾರ ಖುದ್ದು ಸಂತ್ರಸ್ತೆ ಹಾಜರಾಗಿ ಟ್ವಿಟರ್ನಲ್ಲಿ ಉಲ್ಲೇಖಿಸಿದ್ದ ಎಲ್ಲ ಮಾಹಿತಿಯನ್ನು ಲಿಖಿತ ದೂರಿನಲ್ಲಿ ನೀಡಿದ್ದಾರೆ. ದೂರು ಬಂದ ಕೂಡಲೇ ಆರೋಪಿತ ಪಿಎಸ್ಐ ವಿರುದ್ಧ ಎಫ್ಐಆರ್ ದಾಖಲು ಮಾಡಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಡಿಸಿಪಿ ಸಿ.ಕೆ. ಬಾಬಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: VIDEO| ಅರಣ್ಯ ಇಲಾಖೆ ಕರೆದೊಯ್ದಿದ್ದ ಕೊಕ್ಕರೆ-ಆರಿಫ್ ಒಂದಾಗಬೇಕು: ಬಿಜೆಪಿ ಸಂಸದ